ಕಮಲನಗರ: ತಾಲ್ಲೂಕಿನ ಖೇಡ್ ಗ್ರಾಮದ ಬಳಿ ಮಾಂಜ್ರಾ ನದಿ ಪಾಲಾಗಿದ್ದ ಯುವಕ ದೀಪಕ ಕಲ್ಲಪ್ಪ ನಾರಾಯಣಪುರೆ (25) ಅವರ ಶವ ಗುರುವಾರ ಪತ್ತೆಯಾಗಿದೆ.
ಮೃತ ಯುವಕ ಮಂಗಳವಾರ ಬಿತ್ತನೆ ಬೀಜ ತರಲು ಮನೆಗೆ ಮರಳಿದ್ದು, ನದಿ ದಾಟುವಾಗ ನೀರಿನಲ್ಲಿ ಮುಳುಗಿದ್ದ.ಎಸ್ಡಿಆರ್ಎಫ್, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ 21 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು. ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಯುವಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಕ ಅವರು ಖೇಡ್ ಗ್ರಾಮದ ನಿವಾಸಿ ಕಲ್ಲಪ್ಪ ಅವರ ಪುತ್ರ. ಕುಟುಂಬದ ಆಧಾರ ಸ್ತಂಬವಾಗಿದ್ದು, ತಂದೆಯ ಜತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.
ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿಎಸ್ಐ ನಂದಿನಿ.ಎಸ್, ಎಎಸ್ಐ ಉಮಾಜೀ, ರೈಟರ್ ಗುರುನಾಥ, ಜಮಾದಾರ ರಾಜಕುಮಾರ ಸೋನಾರೆ, ವಸಂತ ಭೇಟಿ ನೀಡಿ ಪರಿಶೀಲಿಸಿದರು.