ಬೀದರ್: ದುರ್ಬಲ ವರ್ಗದವರು ಎಂದು ಗುರುತಿಸಲಾದ ಬೀದಿ ಬದಿ ವ್ಯಾಪಾರಿಗಳು ಹಾಗೂ 18 ರಿಂದ 44 ವರ್ಷದ ಒಳಗಿನ ಇತರರಿಗೆ ಕೋವಿಡ್ ಲಸಿಕಾಕರಣಕ್ಕೆ ಶಾಸಕ ರಹೀಂಖಾನ್ ನಗರದ ಉಸ್ಮಾನ್ಗಂಜ್ನಲ್ಲಿ ಚಾಲನೆ ನೀಡಿದರು.
ಲಸಿಕಾಕರಣದಿಂದ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಹೀಗಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಲಸಿಕೆಗಳು ಲಭ್ಯ ಇವೆ. ದುರ್ಬಲ ವರ್ಗದವರು ತಾವಿರುವ ಕಡೆಯಲ್ಲೇ ಲಸಿಕೆ ಪಡೆಯಲು ಬಯಸಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಂಕು ಸೊನ್ನೆಗೆ ಬರುವವರೆಗೂ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ರವೀಂದ್ರನಾಥ ಅಂಗಡಿ, ವೈದ್ಯಾಧಿಕಾರಿ ಡಾ. ಸೋಹೆಲ್ ಇದ್ದರು.