ಬೀದರ್: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.
ಯೋಗ ವೇದಾಂತ ಸೇವಾ ಸಮಿತಿಯ ವತಿಯಿಂದ ಇಲ್ಲಿಯ ವಿ.ಕೆ. ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ತಂದೆ-ತಾಯಿಗಳ ಪೂಜೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂದೆ-ತಾಯಿ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕು. ಅವರನ್ನು ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಯಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು.
ಭಾರತೀಯ ಸಂಸ್ಕೃತಿ ಅನುಸರಿಸುವವರನ್ನು ಇಡೀ ವಿಶ್ವವೇ ಗೌರವಿಸುತ್ತದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಪ್ರಕಾಶ ಜಿ. ಹೇಳಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನದಂದು ತಂದೆ-ತಾಯಿಗಳ ಪೂಜೆ ದಿನ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಯೋಗ ವೇದಾಂತ ಸೇವಾ ಸಮಿತಿಯ ಡಾ. ಸುರೇಂದ್ರ ರೋಡೆ ಮಾತನಾಡಿದರು. ಮಕ್ಕಳು ಪಾಲಕರ ಪಾದಪೂಜೆ ಮಾಡಿದರು. ಡಾ. ಲೋಕೇಶ ಹಿರೇಮಠ, ಸಂಜು ಪಾಟೀಲ ನ್ಯಾಮತಾಬಾದ್, ಸಿದ್ದು ಮಳಖೇಡ, ಅಶೋಕ ದಾರಾ, ದಿಲೀಪ್ ಗಾದಗೆ ಇದ್ದರು.