ಬೀದರ್: ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಹಡಪದ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್.ಟಿ)ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹಡಪದ ಅಪ್ಪಣ್ಣ ಸಮಾಜ ಸಂಘವು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸಂಘದ ಪದಾಧಿಕಾರಿಗಳು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮೀಜಿ ಅವರನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ನೇಮಕ ಮಾಡಬೇಕು. ಬಸವಕಲ್ಯಾಣದ ಅರಿವಿನ ಮನೆ ಪಕ್ಕದ ಹಡಪದ ಅಪ್ಪಣ್ಣ ಗವಿಯಲ್ಲಿ ಹಡಪದ ಅಪ್ಪಣ್ಣ ಅವರ ಮೂರ್ತಿ ಸ್ಥಾಪಿಸಬೇಕು. ಶಾಲಾ, ಕಾಲೇಜು, ವಸತಿ ನಿಲಯ ಹಾಗೂ ಸಮುದಾಯ ಭವನಕ್ಕಾಗಿ 5 ಎಕರೆ ಜಮೀನು ಮಂಜೂರು ಮಾಡಬೇಕು. ರಾಜ್ಯದಲ್ಲಿ ಇರುವ ಹಡಪದ ಸಮಾಜದ ಜನಸಂಖ್ಯೆ ವಿವರ ನೀಡಬೇಕು. ವೀರಣ್ಣ ಹಡಪದ ಸಣ್ಣೂರ ಅವರನ್ನು ವಿಧಾನ ಪರಿಷತ್ ಸದಸ್ಯ ಅಥವಾ ಯಾವುದಾದರೊಂದು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸಂಗಮೇಶ ಹಡಪದ, ಉಪಾಧ್ಯಕ್ಷರಾದ ಗಣೇಶ ಜಿ. ಹಡಪದ, ಶಾಂತಕುಮಾರ ಹಡಪದ, ವೆಂಕಟ ಹಡಪದ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹಡಪದ, ಸಹ ಕಾರ್ಯದರ್ಶಿ ಶಾಂತಕುಮಾರ ಹಡಪದ, ರೇವಣಸಿದ್ದಪ್ಪ ಹಡಪದ, ಮಲ್ಲಿಕಾರ್ಜುನ ಎಸ್. ಹಡಪದ, ಮಲ್ಲಿಕಾರ್ಜುನ ಹಡಪದ ಬಾವಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಡಪದ ಅಪ್ಪಣ್ಣ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹಡಪದ ಅಪ್ಪಣ್ಣ ಸಮಾಜ ಸಂಘದ ಪದಾಧಿಕಾರಿಗಳು ಬೀದರ್ನ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.