ಖಟಕಚಿಂಚೋಳಿ: ಹೋಬಳಿಯ ದಾಡಗಿ, ಡಾವರಗಾಂವ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತಿ ಗ್ರಾಮದ ಆಂಜನೇಯನ ದೇವಸ್ಥಾನಗಳಲ್ಲಿ ಬಾಲ ಹನುಮನ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು.
ದೇವಸ್ಥಾನಗಳನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆಯೇ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಚಳಕಾಪುರ ಗ್ರಾಮದ ಪುರಾಣ ಪ್ರಸಿದ್ಧ ಹನುಮ ದೇವಸ್ಥಾನದಲ್ಲಿ ಬೆಳಿಗ್ಗೆಯೇ ತೊಟ್ಟಿಲೋತ್ಸವ ನಡೆಯಿತು. ಗ್ರಾಮಸ್ಥರು, ಸುತ್ತ ಮುತ್ತಲಿನ ಹಳ್ಳಿಗಳ ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ಹನುಮನ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತಿ ಭಾವ ಮೆರೆದರು.
ಭಜನೆ, ಕೀರ್ತನೆ, ಹನುಮಾನ್ ಚಾಲೀಸಾ, ಧ್ಯಾನದ ಮೂಲಕ ದಿನವಿಡೀ ಹನುಮನ ಸ್ಮರಣೆ ಮಾಡಿದರು. ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ನೈವೇದ್ಯ, ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ಖಟಕಚಿಂಚೋಳಿ ಹೋಬಳಿಯ ಚಳಕಾಪುರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಬಾಲ ಹನುಮನ ತೊಟ್ಟಿಲು ಕಾರ್ಯಕ್ರಮ ನಡೆಯಿತು
ಹರಕೆ ಹೊತ್ತ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಕಾಯಿ, ಕರ್ಪೂರ ಒಡೆದು ಭಕ್ತಿಯಿಂದ ನಮಸ್ಕರಿಸಿ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗಲಿ ಎಂದು ಬೇಡಿಕೊಂಡರು. ನಂತರ ಗ್ರಾಮದ ಹೊರವಲಯದ ಸಂಜೀವಿನಿ ಪರ್ವತದಲ್ಲಿ ಆಯೋಜಿಸಿದ್ದ ಪ್ರಸಾದವನ್ನು ಸ್ವೀಕರಿಸಿದರು.