ಬೀದರ್: ಇಲ್ಲಿಯ ಹುಡ್ಕೊ ಕಾಲೊನಿಯಲ್ಲಿ ವಿ.ಎಂ. ರಾಂಪುರೆ ಪೂರ್ವ ಪ್ರಾಥಮಿಕ ಶಾಲೆಯನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಉದ್ಘಾಟಿಸಿದರು.
ಯಾವುದೇ ವ್ಯಕ್ತಿ ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಅವರು ಹೇಳಿದರು. ರಾಂಪುರೆ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕೆ ಹೇಳಿದರು.
ಗಡಿ ಜಿಲ್ಲೆಯ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಸಂಸ್ಕಾರಯುತ ಶಿಕ್ಷಣ ಒದಗಿಸಲು ರಾಂಪುರೆ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಹಮಿಲಾಪುರದ ಮುಖ್ಯ ಶಾಖೆಯಲ್ಲಿ ನರ್ಸರಿಯಿಂದ 5ನೇ ತರಗತಿ ವರೆಗೆ 205 ವಿದ್ಯಾರ್ಥಿಗಳು ಇದ್ದಾರೆ. ಬೀದರ್ನಲ್ಲಿ ಮೊದಲ ಶಾಖೆ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ನಗರದ ವಿವಿಧೆಡೆ ಶಾಖೆಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆ ಅಧ್ಯಕ್ಷ ಮಹೇಶ ಎಸ್. ರಾಂಪುರೆ ನುಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಜಗನ್ನಾಥ ಮೂರ್ತಿ, ಕುದುರೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಕುದುರೆ, ಸಿಆರ್ಪಿಗಳಾದ ಮಾಣಿಕರಾವ್ ಪವಾರ್, ರಾಮಶೆಟ್ಟಿ, ಬಸವಕುಮಾರ ಚಟ್ನಳ್ಳಿ, ಬಾಲಾಜಿ ಬಿರಾದಾರ ಮಾತನಾಡಿದರು.
ಶಾಲೆಯ ಪ್ರಿಯಂಕಾ ದೇವದುರ್ಗ, ನಿಕಿತಾ ಕುಂದೆ, ನಂದಿನಿ ಭುರಸೆ, ಅಂಬಿಕಾ, ತ್ರಿವೇಣಿ, ಶ್ರುತಿ, ಸುನೀತಾ, ಪ್ರಿಯಂಕಾ, ಸಂಗೀತಾ ಬಲ್ಲೂರೆ, ಶ್ರೀದೇವಿ ವಲ್ಲಾಪುರೆ, ವ್ಯವಸ್ಥಾಪಕ ದಿನೇಶ್ ಸೋನಿ ಇದ್ದರು.
5ನೇ ತರಗತಿ ವಿದ್ಯಾರ್ಥಿ ಅಶ್ವಜೀತ್ ಸೋನಿ ಸ್ವಾಗತಿಸಿದರು. ಪ್ರಿ ಸ್ಕೂಲ್ ಮುಖ್ಯಶಿಕ್ಷಕಿ ಶೈಲಜಾ ಡಿ. ಗುಪ್ತಾ ನಿರೂಪಿಸಿದರು. ವಿ.ಎಂ. ರಾಂಪುರೆ ಪಬ್ಲಿಕ್ ಸ್ಕೂಲ್ ಮುಖ್ಯಶಿಕ್ಷಕಿ ಅಂಬಿಕಾ ವಿ. ರಾಂಪುರೆ ವಂದಿಸಿದರು.