ಚಿಟಗುಪ್ಪ: ಬೇಸಿಗೆ ಉರಿಬಿಸಿಲಿನ ತಾಪದಿಂದ ರಕ್ಷಣೆ, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ದನಗಳು ಪಟ್ಟಣದ ಅಂಗಡಿಗಳ ಒಳಗೆ ಯಾರ ಭಯವಿಲ್ಲದೆ ನುಗ್ಗುತ್ತಿವೆ.
ಅಂಗಡಿಗಳ ಮುಂದೆ ಬಕೆಟ್ಗಳಲ್ಲಿ ತುಂಬಿಟ್ಟ ನೀರು ಕುಡಿಯುತ್ತಿವೆ. ದವಸ ಧಾನ್ಯ, ಹಣ್ಣು, ತರಕಾರಿ ಅಂಗಡಿಗಳ ಮುಂದೆ ಜೋಡಿಸಿಟ್ಟ ಪದಾರ್ಥಗಳು ತಿನ್ನುತ್ತಿವೆ. ಕೆಲವು ವ್ಯಾಪಾರಿಗಳಿಗೆ ಕಿರಿಕಿರಿಯಾದರೇ, ಕೆಲವರು ತಾವಾಗಿಯೇ ದನಗಳಿಗೆ ಬನ್, ಬ್ರೆಡ್, ರೊಟ್ಟಿ, ಹಣ್ಣು ತಿನ್ನಿಸುತ್ತಿದ್ದಾರೆ.
ಬರದಿಂದ ಅಡವಿ, ಹೊಲ ಗದ್ದೆಗಳಲ್ಲಿ ಮೇವು ಸಿಗಲಾರದಕ್ಕೆ ಸಾಕಿದ ಮಾಲೀಕರು ಎಲ್ಲಾದರೂ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ಮನೆಗೆ ಬರಲಿ ಎಂಬಂತೆ ದನಗಳಿಗೆ ಬಿಡುತ್ತಿದ್ದಾರೆ. ಕೆಲವು ದನಗಳು ದೇವರ ಹೆಸರಿನಲ್ಲಿ ಗೂಳಿ ರೂಪದಲ್ಲಿ ಬಿಟ್ಟಿದ್ದರಿಂದ ಅವುಗಳಿಗೆ ಯಾವ ಆಶ್ರಯವೂ ಇಲ್ಲದಕ್ಕೆ ಎಲ್ಲೆಂದರಲ್ಲಿ ತಿರುಗಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಎನ್ನುತ್ತಾರೆ ವರ್ತಕರಾದ ರಮೇಶ್, ಚಂದು, ಸೋಮನಾಥ್, ಪ್ರಭು.
ಬಿಡಾಡಿ ದನಗಳು ನಡುರಸ್ತೆಯಲ್ಲೇ ಮಲಗುವುದು, ಕಾದಾಟಕ್ಕೆ ಇಳಿಯುವುದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಪಟ್ಟಣದ ಬಸವರಾಜ್ ವೃತ್ತದಿಂದ ಕುಡಂಬಲ್ ರಸ್ತೆ ಮಧ್ಯ ಅಂಚೆ ಕಚೇರಿ ಎದುರಿನ ರಸ್ತೆ, ಹಳೆ ಬಸ್ ನಿಲ್ದಾಣ ರಸ್ತೆ, ಗಾಂಧಿ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ದನಗಳು ಗುಂಪುಗುಂಪಾಗಿ ಮಲಗಿರುತ್ತವೆ.
ಬೇಸಿಗೆ ಮುಗಿಯುವ ತನಕ ಪುರಸಭೆ ಪಟ್ಟಣದ ವಿವಿಧೆಡೆ ದನಗಳಿಗೆ ಕುಡಿಯಲು ನೀರಿನ ತೊಟ್ಟಿ, ಹೊರ ಊರುಗಳಿಂದ ಪಟ್ಟಣಕ್ಕೆ ಬರುವ ನಾಗರಿಕರಿಗೆ ನೀರಿನ ಮಡಕೆ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣದ ಗೌರೀಶ್, ಶಿವಕುಮಾರ್, ಉತ್ತಮಕುಮಾರ್ ಇತರರು ಆಗ್ರಹ.
ಬೀದಿಯಲ್ಲಿ ಓಡಾಡುವ ಬಿಡಾಡಿ ದನಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಗೋ ಶಾಲೆಗೆ ಸಾಗಿಸಬೇಕು. ಜಾನುವಾರು ಸಾಕಣೆದಾರರನ್ನು ಪತ್ತೆ ಹಚ್ಚಿ ದನಗಳು ರಸ್ತೆಗೆ ಬಿಡದಂತೆ ಸೂಚಿಸಿ ನಿಯಮ ಉಲ್ಲಂಘಿಸಿದಲ್ಲಿ ಸೂಕ್ತ ದಂಡ ವಿಧಿಸಲಾಗುತ್ತದೆ ಎಂಬ ಸಂದೇಶ ಪುರಸಭೆ ನೀಡಬೇಕು ಎನ್ನುತ್ತಾರೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ.
ನಾಗರಿಕರಿಗೆ ಹಲವು ಬಾರಿ ದನಗಳು ರಸ್ತೆಗಳ ಮೇಲೆ ಬಿಡಬಾರದು ಸಾಕಿದ ಜಾನುವಾರುಗಳ ರಕ್ಷಣೆ ಅವುಗಳ ಮಾಲೀಕರು ಮಾಡಬೇಕು ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
–ಎಸ್.ವಿ.ಭೂಸ್ಲೆ ಮುಖ್ಯಾಧಿಕಾರಿ ಪುರಸಭೆ ಚಿಟಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.