ಬೀದರ್: ‘ನಗರದ ಪಾಪನಾಶ ಹಾಗೂ ಗೋರನಳ್ಳಿ ಕೆರೆಗಳನ್ನು ತಲಾ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಜಿಲ್ಲಾ ಆಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಹೇಳಿದರು.
ವಿವಿಧ ಸೌಲಭ್ಯ ಒದಗಿಸಿ ಎರಡೂ ಕೆರೆಗಳನ್ನು ಪ್ರವಾಸಿ ತಾಣವಾಗಿಸುವ ಯೋಜನೆ ಇದೆ. ಈಗಾಗಲೇ ಜಿಲ್ಲಾ ಆಡಳಿತದಿಂದ ಪಾಪನಾಶ ಕೆರೆಯ ಕ್ರಿಯಾಯೋಜನೆ ಸಿದ್ಧಗೊಂಡಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒತ್ತುವರಿ ದೂರು ಹಿನ್ನೆಲೆಯಲ್ಲಿ ಗೋರನಳ್ಳಿ ಕೆರೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಸಮೀಕ್ಷೆ ಬಳಿಕ ಈ ಕೆರೆಯ ಅಭಿವೃದ್ಧಿಯೂ ನಡೆಯಲಿದೆ. ಈ ಕೆರೆಯಲ್ಲಿ ಗಣೇಶ ವಿಸರ್ಜನೆ ಹೊಂಡಕ್ಕಾಗಿಯೂ ಜಿಲ್ಲಾ ಆಡಳಿಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.
ಗೋರನಳ್ಳಿ ಸಮೀಪದ ಬುಡಾದ 156 ನಿವೇಶನಗಳನ್ನು ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಉಳಿದ 32 ನಿವೇಶನ ಹಾಗೂ ಕಾರ್ನರ್ ನಿವೇಶನಗಳ ಇ-ಹರಾಜಿಗೆ ವಾರದೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಪ್ರಾಧಿಕಾರ ದಿಂದ ಅಭಿವೃದ್ಧಿಪಡಿಸಲಾದ ಉದ್ಯಾನಗಳಿಗೆ ನಾಡು-ನುಡಿಗೆ ಸೇವೆ ಸಲ್ಲಿಸಿದವರ ಹೆಸರಿಡಲು ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿದೆ. 75 ಉದ್ಯಾನಗಳ ಪೈಕಿ ಈಗಾಗಲೇ 25 ಉದ್ಯಾನಗಳ ಹೆಸರು ಅಂತಿಮಗೊಳಿಸಲಾಗಿದೆ ಎಂದರು.