ಬೀದರ್: ಕರ್ನಾಟಕದ ರಾಜ್ಯೋತ್ಸವದ ಪ್ರಯುಕ್ತ ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ‘ನಗೆಹಬ್ಬ’ ಕಾರ್ಯಕ್ರಮ ನಡೆಯಿತು.
ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಮಕ್ಕಳು ಹೆತ್ತ ತಂದೆ-ತಾಯಿಗೆ, ಹೊತ್ತ ಭಾರತ ಮಾತೆಗೆ ಎಂದಿಗೂ ದ್ರೋಹ ಬಗೆಯಬಾರದು’ ಎಂದು ಹೇಳಿದರು.
‘ಪಾಲಕರು ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹಾಕದೆ 6 ರಿಂದ 16 ವರ್ಷದ ವರೆಗೆ ಅವರ ಸರಿ ತಪ್ಪುಗಳನ್ನು ತಿಳಿಸಬೇಕು. ಸರಿ ದಾರಿಯಲ್ಲಿ ಸಾಗುವಂತೆ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ‘ದಕ್ಷಿಣ ಕನ್ನಡ ಕರಾವಳಿ ಸಂಘದವರು ಕಳೆದ 24 ವರ್ಷಗಳಿಂದ ಬೀದರ್ನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದ್ದಾರೆ‘ ಎಂದು ಬಣ್ಣಿಸಿದರು.
ಸಂಘದ ಅಧ್ಯಕ್ಷ ಪಿ.ಎನ್. ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಎ.ಎಸ್. ಪ್ರಭಾಕರ ದಯಾನಂದ ಶೆಟ್ಟಿ, ಗುರುಮೂರ್ತಿ, ರಾಜೇಶ ರಾವ್ ಇದ್ದರು. ರಘುರಾಮ ಉಪಾಧ್ಯಾಯ ಸ್ವಾಗತಿಸಿದರು.
ಕೆ. ಸತ್ಯಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಅಡಿಗ ವಂದಿಸಿದರು.