ಬೀದರ್: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ನಗರದಲ್ಲಿ ಪತ್ರ ಚಳವಳಿ ನಡೆಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ನಿಯಂತ್ರಿಸಿ ಬಡವರನ್ನು ರಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ವಿಳಾಸಕ್ಕೆ ಬರೆದ ಪತ್ರವನ್ನು ನಗರದ ಅಂಚೆ ಪೆಟ್ಟಿಗೆಗೆ ಹಾಕಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುಬಾಶಿರ್ ಶಿಂಧೆ ಮಾತನಾಡಿ, ಪೆಟ್ರೋಲ್ ಬೆಲೆ ಲೀಟರ್ಗೆ ರೂ. 100 ದಾಟಿದೆ. 2014 ರಿಂದ ಈವರೆಗೆ 300 ಬಾರಿ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಮಧ್ಯಮ ವರ್ಗದವರು, ಬಡವರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಟೀಕಿಸಿದರು.
ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ಅಲಿ, ರೆಹನ್, ಎಂ.ಡಿ. ಅಫ್ರೋಜ್, ಸೈಯದ್ ಟ್ಯಾನ್ವರ್, ಎಂ.ಡಿ. ಜುಬೈರ್, ಎಂ.ಡಿ. ಓಸ್ಮನ್, ಅಬ್ದುಲ್ ಸಮದ್, ಮೊಹಿನಾಜ್, ಇಸ್ಮಾಯಿಲ್ ಇದ್ದರು.