ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ? ಸಚಿವ ಭಗವಂತ ಖೂಬಾ

Published 1 ಮೇ 2024, 16:23 IST
Last Updated 1 ಮೇ 2024, 16:23 IST
ಅಕ್ಷರ ಗಾತ್ರ

ಬೀದರ್‌: ‘ಭಾಲ್ಕಿ ಹಿರೇಮಠದ ಪೂಜ್ಯರು, ಈ ಭಾಗದ ನಡೆದಾಡುವ ದೇವರೆಂಬ ಗೌರವಕ್ಕೆ ಪಾತ್ರರಾಗಿರುವ ಚನ್ನಬಸವ ಪಟ್ಟದ್ದೇವರು ಬೆವರು ಸುರಿಸಿ ಕಟ್ಟಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಸಿದುಕೊಂಡು, ಭಾಲ್ಕಿ ಹಿರೇಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ? ಇಂತಹವರು ಇನ್ನೊಬ್ಬರ ಬಗ್ಗೆ ಮಾತನಾಡಬಹುದಾ?’ ಹೀಗೆಂದು ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿಸಿದ್ದಾರೆ.

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಜನರ ಮುಂದೆ ಹೇಳಿರುವ ಸತ್ಯಾಂಶಗಳು ಈಶ್ವರ ಖಂಡ್ರೆಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸತ್ಯ ಯಾವಾಗಲು ಕಹಿಯಾಗಿರುತ್ತದೆ. ಅದಕ್ಕೆ ಯತ್ನಾಳರ ಬಗ್ಗೆ ಮನಬಂದಂತೆ ಮಾತಾಡುತ್ತಿದ್ದಾರೆ. ಇವರ ವಿರುದ್ಧ ಯಾರಾದರೂ ಸತ್ಯ ಮಾತಾಡಿದರೆ ಅವರನ್ನು ನೇರವಾಗಿ ಎದುರಿಸಲು ಆಗದೆ ಅವರ ವಿರುದ್ದ ಸುಳ್ಳು ಅಪಪ್ರಚಾರ ಮಾಡುತ್ತಾರೆ. ನನ್ನ ವಿರುದ್ಧವೂ ಅದೇ ರೀತಿ ಮಾಡುತ್ತಿದ್ದಾರೆ. ಸುಳ್ಳನ್ನು ಎಷ್ಟು ದಿನ ಮುಚ್ಚಿಟ್ಟುಕೊಳ್ಳಲು ಸಾಧ್ಯ’ ಎಂದು ಬುಧವಾರ ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ಈಶ್ವರ ಖಂಡ್ರೆಯವರೇ, ‘ಪೂಜ್ಯರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಸದ್ಯ ಇರುವ ಪೂಜ್ಯರಿಗೂ ನಿಮ್ಮ ಆಡಳಿತ ಮಂಡಳಿಯಲ್ಲಿ ಸೇರಿಸಿಕೊಂಡಿಲ್ಲ. ನೀವು ಸಂಸ್ಕಾರದ ಬಗ್ಗೆ ಮಾತನಾಡುವುದು ನೋಡಿದರೆ, ‘ಬಿಲ್ಲಿ ಸೌ ಚುವ್ವೆ ಖಾಕೆ ಹಜ್ ಕೋ ಚಲಿ’ ಎನ್ನುವ ಮಾತು ನೆನಪಿಗೆ ಬರುತ್ತದೆ. ನಿಮ್ಮಿಂದ ಜಿಲ್ಲೆಯಲ್ಲಿ ಯಾವ ಲಿಂಗಾಯತರು ಬೆಳೆದಿದ್ದಾರೆ? ಲಿಂಗಾಯತರ ಪೆಟ್ರೋಲ್ ಪಂಪ್, ಫಾರ್ಮ್‌ಹೌಸ್ ಕೆಡವಿದ ಮಹನೀಯರು ನೀವು. ವೀರಶೈವ ಲಿಂಗಾಯತರಿಗೆ ನಿಮ್ಮ ಕೊಡುಗೆ ಏನಿದೆ? ಮಕ್ಕಳಿಗಾಗಿ ಒಂದೇ ಒಂದು ಹಾಸ್ಟೆಲ್‌ ಕಟ್ಟಿಸಿಲ್ಲ. ಜಿಲ್ಲೆಯಲ್ಲಿ ನೀವು, ನಿಮಗೆ ಲಿಂಗಾಯತರ ಹೆಸರಿನ ಮೇಲೆ ಅಧಿಕಾರ ಬೇಕು. ಆದರೆ, ಅವರ ಅಭಿವೃದ್ದಿ ಬೇಡ’ ಎಂದು ಕುಟುಕಿದ್ದಾರೆ. 

‘ಯತ್ನಾಳ ಸ್ಥಾಪಿಸಿದ ಸಿದ್ಧಸಿರಿ ಸಂಸ್ಥೆಯ ಮೂಲಕ ಸಾವಿರಾರು ಜನರು ಉದ್ಯೋಗ ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ನೀವು ಅವರ ಕಾರ್ಖಾನೆಗೆ ಬೀಗ ಹಾಕಿ ಜನರ ಜೀವನಕ್ಕೆ ಪೆಟ್ಟು ಹಾಕಿದ್ದೀರಿ. ಯತ್ನಾಳ ಅವರ ಕಾರ್ಯಕ್ರಮದ ಯಶಸ್ಸು ನೋಡಿ, ಹೆದರಿ ಇಷ್ಟು ಕೆಳಮಟ್ಟದ ಮಾತುಗಳು ಆಡುತ್ತಿರುವ ನೀವು ಶಾಸಕರಾಗಲು ಯೋಗ್ಯರಿಲ್ಲ’ ಎಂದು ಟೀಕಿಸಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ನೀವು ಜನರಿಗೆ, ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ನೌಕರರಿಗೆ ಹೆದರಿಸಿ ಮತದಾನ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇಡೀ ಜಿಲ್ಲೆಗೆ ಗೊತ್ತಿದೆ. ನಿಮ್ಮಂತಹವರು ಯತ್ನಾಳರ ಬಗ್ಗೆಯಾಗಲಿ, ಬಿಜೆಪಿಯವರ ಬಗ್ಗೆಯಾಗಲಿ ಮಾತನಾಡಲು ನಿಮಗೆ ನೈತಿಕತೆಯಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT