ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳೆಲ್ಲೆಡೆ ಬುಧವಾರ ಮಕರ ಸಂಕ್ರಾಂತಿ ಹಬ್ಬದ ಸಡಗರ. ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.
ಹಬ್ಬದ ಮುನ್ನಾ ದಿನ ಜನರು ಸಂತೆಯಲ್ಲಿ ಹಬ್ಬದ ವಸ್ತುಗಳಾದ ಸಿಹಿ ತಿನಿಸು, ವಸ್ತುಗಳನ್ನು ಖರೀದಿಸಿದರು.
ಅಲ್ಲಮಪ್ರಭು ವೃತ್ತಬಳಿ, ಸೋನಾಳ ರಸ್ತೆ ಬದಿ, ಉದಗೀರ ರಸ್ತೆ ಬಳಿ ರೈತರು ಕಬ್ಬಿನ ಜಲ್ಲೆಯನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಒಂದು ಜತೆ ಕಬ್ಬಿನ ಜತೆ ₹40 ರಿಂದ 50ರವರೆಗೆ ಮಾರಾಟವಾಯಿತು.
ಈ ಬಾರಿ ಹೂ, ಹಣ್ಣುಗಳ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿತು. ಎಳ್ಳು, ಬೆಲ್ಲ, ಕಬ್ಬಿನ ತುಂಡು, ವಠಾಣಿ, ಬೋರೆಹಣ್ಣು, ಚಾಪಳಕಾಯಿ, ಖರ್ಜೂರ, ಶೇಂಗಾ, ಕುಸುರೆಳ್ಳು, ಗಜ್ಜರಿ, ಸಕ್ಕರೆ,ಒಣಕೊಬ್ಬರಿ, ಕ್ಯಾರೆಕಾಯಿ, ಸಜ್ಜಿಗೆ ಅಚ್ಚುಗಳನ್ನು ಜನರು ಹೆಚ್ಚಾಗಿ ಖರೀದಿಸಿದರು.
ಮಕರ ಸಂಕ್ರಾತಿ ಹಬ್ಬದ ನಂತರ ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಹಿನ್ನಲೆಯಲ್ಲಿ ಕಮಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ದೇವಸ್ಥಾನಗಲ್ಲಿಯೂ ಎಳ್ಳು-ಅರಸಿಣ ಮಿಶ್ರಣದಿಂದ ತಯಾರಿಸಿದ ಪೇಸ್ಟ್ನಿಂದ ಬುಧವಾರ ತೊಳೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಮಹಿಳೆಯರು ಭೋಗಿ ಎಂದು ನೀರು ಹೊಯ್ದುಕೊಂಡು ವಿಶೇಷವಾಗಿ ತೈಯಾರಿಸಿದ ಪಕ್ವಾನ ದೇವಸ್ಥಾನಗಳಲ್ಲಿ ಸಂಕ್ರಾಂತಿಯ ಪೂಜೆ ಮಾಡಿದರು.
ಕೆಲವೆಡೆ ಮಂಗಳವಾರ ಆಚರಣೆ: ಮಹಾರಾಷ್ಟ್ರದ ಉದಗೀರ, ತೋಗರಿ, ದೇವಣಿ, ಮೋಘಾ ಮತ್ತು ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಮಂಗಳವಾರ ಆಚರಿಸಲಾಯಿತು. ಸಂಜೆ ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಹೊಸಬಟ್ಟೆ ಧರಿಸಿ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡರು.