ಬೀದರ್: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ತಾಲ್ಲೂಕಿನ ಚಿಟ್ಟಾದ ನವೀನ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು.
ಶಾಲೆ ಆವರಣದಲ್ಲಿನ ಅನುಪಯುಕ್ತ ವಸ್ತು, ಕಸ ಕಡ್ಡಿಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಿದರು.
ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಲೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಅವರು, ಸ್ವಚ್ಛತೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನ ಗಾಂಧಿ ಜಯಂತಿಗೆ ಸೀಮಿತ ಆಗಬಾರದು. ಅದು ನಿರಂತರ ಪ್ರಕ್ರಿಯೆ ಆಗಬೇಕು ಎಂದು ತಿಳಿಸಿದರು.
ಮನೆ, ಸುತ್ತಮುತ್ತಲಿನ ಪರಿಸರ, ಹಳ್ಳಿ, ಪಟ್ಟಣ, ನಗರಗಳನ್ನು ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪಾಲಕರು ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆ ಪ್ರಜ್ಞೆ ಮೂಡಿಸಬೇಕು. ಸಾಮಾಜಿಕ ಹೊಣೆಗಾರಿಕೆ ಕುರಿತು ಸಹ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಶಾಲೆ ಕಾರ್ಯದರ್ಶಿ ಶೀಲಾ ಚಿಕ್ಕಬಸೆ, ಮುಖ್ಯ ಶಿಕ್ಷಕಿ ಸುನೀತಾ, ಶಿಕ್ಷಕರಾದ ಸ್ವಾತಿ ಕುಡತೆ, ಗಂಗಮ್ಮ, ಮಹೇಶ, ಪಲ್ಲವಿ ಇದ್ದರು.