ಭಾಲ್ಕಿ: ಬೀದರ್ ಜಿಲ್ಲೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು 10 ಆಮ್ಲಜನಕ ಸಾಂದ್ರಕ ಯಂತ್ರ (ಆಕ್ಸಿಜನ್ ಕಾನ್ಸೆಂಟ್ರೇಟರ್ ಮಷಿನ್) ಗಳನ್ನು ಕೊಡುಗೆ ನೀಡಿದ್ದಾರೆ. ಬೀದರ್ನ ಬ್ರಿಮ್ಸ್ ಮತ್ತು ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಗೆ ತಲಾ 5 ಯಂತ್ರಗಳನ್ನು ಹಸ್ತಾಂತರ ಮಾಡಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಸಾಗರ ಈಶ್ವರ ಖಂಡ್ರೆ 5 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಹಸ್ತಾಂತರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ ಮಾತನಾಡಿ, ‘ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಪ್ರತಿದಿನ ಆಮ್ಲಜನಕ ಚಿಕಿತ್ಸೆಗೆ ಸುಮಾರು ₹20 ಸಾವಿರ ಬಿಲ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸೋಂಕಿತರ ಪ್ರಾಣ ರಕ್ಷಣೆಗಾಗಿ ಹೆಚ್ಚುವರಿ ರೆಮ್ಡಿಸಿವಿರ್, ಆಮ್ಲಜನಕ, ಬೆಡ್ ವ್ಯವಸ್ಥೆ ಮಾಡಲು ಈಶ್ವರ ಖಂಡ್ರೆ ಅವರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ’ ಎಂದರು.
‘ಸೋಂಕಿತರಿಗೆ ಆಮ್ಲಜನಕ ಕೊರತೆ ನೀಗಿಸಲು ವಾತಾವರಣದಲ್ಲಿನ ಆಮ್ಲಜನಕವನ್ನು ಶುದ್ಧೀಕರಿಸಿ ರೋಗಿಗಳಿಗೆ ನೀಡಬಹುದಾದ 10 ಆಮ್ಲಜನಕ ಸಾಂದ್ರಕ ಯಂತ್ರ ನೀಡಲಾಗಿದೆ. ಈ ಸಾಂದ್ರಕಗಳು ಸೋಂಕಿತರಿಗಷ್ಟೇ ಅಲ್ಲ, ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ ಮೇಲೂ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ 2 ರಿಂದ 4 ಲೀಟರ್ ಪ್ರಾಣವಾಯು ಅಗತ್ಯ ಇರುತ್ತದೆ. ಈ ಸಾಂದ್ರಕ ಅವರ ಜೀವ ರಕ್ಷಣೆಗೆ ನೆರವಾಗುತ್ತದೆ’ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.
‘ಭಾಲ್ಕಿ ಆಸ್ಪತ್ರೆಗೆ ಈಗಾಗಲೇ ವೈಯಕ್ತಿಕವಾಗಿ 100 ಆಮ್ಲಜನಕ ಸಿಲಿಂಡರ್ಗಳ ವ್ಯವಸ್ಥೆ, 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಿದ್ದೇನೆ. ಕ್ಷೇತ್ರದ ಜನರ ಅನುಕೂಲಕ್ಕಾಗಿ ದಿನದ 24 ಗಂಟೆ ವಾರದ ಏಳೂ ದಿನ ಕಾರ್ಯ ನಿರ್ವಹಿಸಿ, ರೋಗಿಗಳನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ಕರೆತರಲು ಅನುಕೂಲವಾಗುವಂತೆ ಉಚಿತ 2 ಅಂಬುಲೆನ್ಸ್ಗಳನ್ನು ಕೊಟ್ಟಿದ್ದೇನೆ’ ಎಂದು ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪ್ರಕಾಶ ಮಾಶೆಟ್ಟೆ, ಪ್ರಮುಖರಾದ ಶಂಕರ ದೊಡ್ಡಿ, ಮನ್ನಾನಸೇಠ್, ಧನರಾಜ ಹಂಗರಗಿ, ವಿಲಾಸ ಮೊರೆ, ಶಶಿಧರ ಕೋಸಂಬೆ, ಕೈಲಾಸ ಭಾವಿಕಟ್ಟಿ, ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ್, ತಾಲ್ಲೂಕು ವೈದ್ಯಾಧಿಕಾರಿ ಜ್ಞಾನೇಶ್ವರ ನಿರಗುಡೆ, ಡಾ.ಶಶಿಕಾಂತ ಭೂರೆ ಇದ್ದರು