ಬೀದರ್: ಆಧುನಿಕ ಸಾಹಿತ್ಯದಲ್ಲಿ ಬದುಕು ಮತ್ತು ಸಾಹಿತ್ಯ ಬೇರೆ ಎನ್ನುವ ನಿಲುವಿನ ನಡುವೆ ಬದುಕು ಹಾಗೂ ಬರಹ ಸಮನ್ವಯಗೊಳಿಸಿದ ಅಪರೂಪದ ಕವಿ ಶಿವಸ್ವಾಮಿ ಚೀನಕೇರಿ ಎಂದು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಚೆನ್ನವೀರ ಸ್ವಾಮೀಜಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ‘ನನ್ನ ಜೀವನ ನನ್ನ ಸಾಧನೆ' ಸಾಧಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ಹಾಗೂ ಡಾ.ವೀರಶೆಟ್ಟಿ ಗಾರಂಪಳ್ಳಿ ರಚಿತ ಹಾವಸೆಗಲ್ಲಿನ ಪಥಿಕ ಶಿವಸ್ವಾಮಿ ಚೀನಕೇರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿವಸ್ವಾಮಿ ಅವರಿಗೆ ಭೌತಿಕ ಕಣ್ಣುಗಳು ಇಲ್ಲವಾದರೂ ಸಾಹಿತ್ಯ ಹಾಗೂ ಸಂಗೀತದ ಎರಡು ಒಳಗಣ್ಣುಗಳಿರುವ ಕಾರಣವಾಗಿಯೇ ಅವರಿಂದ ಉತ್ಕೃಷ್ಟ ಸಾಹಿತ್ಯ ಹೊರ ತರಲು ಸಾಧ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಸದಾನಂದ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಬುರಗಿಯ ದೊಡ್ಡಪ್ಪ ಅಪ್ಪ ಪದವಿಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ. ಆನಂದ ಸಿದ್ಧಮಣಿ ಪುಸ್ತಕ ಪರಿಚಯಿಸಿದರು. ಕೊಪ್ಪಳದ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಬಸವಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ಲೇಖಕ ಡಾ.ವೀರಶೆಟ್ಟಿ ಗಾರಂಪಳ್ಳಿ, ಸಾಹಿತಿ ಶಿವಸ್ವಾಮಿ ಚೀನಕೆರಿ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಟಿ.ಎಂ. ಮಚ್ಚೆ ಸ್ವಾಗತಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.