ಭಾಲ್ಕಿ: ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಯೋಗ ಗುರು ವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು, ನೀರಡಿಕೆ, ನಿದ್ರೆ, ವಿಸರ್ಜನೆ ಕ್ರಿಯೆಗಳು ಸಮರ್ಪಕವಾಗಿ ನಡೆದರೆ, ಇವು ಆರೋಗ್ಯ ಪೂರ್ಣದ ಗುಣಲಕ್ಷಣಗಳು ಎನಿಸುತ್ತವೆ. ಇಂದಿನ ಒತ್ತಡದ ಜೀವನದಲ್ಲಿ ಬದಲಾದ ಆಹಾರ ಸೇವನೆ ಪದ್ಧತಿಯಿಂದ ರೋಗ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದರು.
ಪ್ರತಿದಿನ ಪ್ರಾಣಾಯಾಮ, ಕಪಾಲಭಾತಿ ಆಸನ ಅಭ್ಯಾಸದಿಂದ ಮಧುಮೇಹ ಸೇರಿ ಮುಂತಾದ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಪ್ರತಿದಿನದ 24 ಗಂಟೆಗಳಲ್ಲಿ 1 ಗಂಟೆ ಸಮಯ ಯೋಗಕ್ಕೆ ಮೀಸಲಿಟ್ಟರೆ ನಮ್ಮ ಜೀವನ ಆರೋಗ್ಯ ಪೂರ್ಣದಿಂದ ಕೂಡಿರುತ್ತದೆ ಎಂದರು.
ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರಾಗಿದ್ದಾರೆ. ಅವರ ಪ್ರವಚನದಿಂದ ಅಸಂಖ್ಯಾತ ಭಕ್ತರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಅಂತಹ ಶ್ರೇಷ್ಠ ಜ್ಞಾನಯೋಗಿಗಳು ಈ ಭಾಗಕ್ಕೆ ಬಂದಿರುವುದು ಎಲ್ಲರ ಪುಣ್ಯವೆಂದು ಭಾವಿಸಿದ್ದೇನೆ. ಭಕ್ತರು ಅವರ ಪ್ರವಚನದ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಇದ್ದರು.