ಬೀದರ್: 2005ರಲ್ಲಿ ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಣವ್ ಮುಖರ್ಜಿ ಬೀದರ್ ತಾಲ್ಲೂಕಿನ ರೇಕುಳಗಿಯ ಶಂಭುಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ಬಿಗಿ ಪೊಲೀಸ್ ಭದ್ರತೆಯ ಮಧ್ಯೆ ಆಗಮಿಸಿದ್ದ ಅವರು ದೇಗುಲದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಸಲ್ಲಿಸಿದ್ದರು.
ವಿಶೇಷ ಪ್ರಾರ್ಥನೆ:ಪ್ರಣವ್ ಮುಖರ್ಜಿ ಅವರು 2012 ಜುಲೈನಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ನಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಗೆಲುವಿಗಾಗಿ ಪ್ರಾರ್ಥಿಸಿ ಅವರ ಕುಟುಂಬದ ಸದಸ್ಯರು ಬೀದರ್ ಜಿಲ್ಲೆಯ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಮುಖರ್ಜಿ ಅವರ ಸೊಸೆ ಚಿತ್ರಲೇಖಾ ಮುಖರ್ಜಿ ಮತ್ತು ಅವರ ಮೊಮ್ಮಗ ಅರ್ಜುನ್ ಮುಖರ್ಜಿ ಅವರು ಚಿಟಗುಪ್ಪ ತಾಲ್ಲೂಕಿನ ಲಿಂಗೋಳ್ ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಬೀದರ್ ತಾಲ್ಲೂಕಿನ ರೇಕುಳಗಿಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದರು. ನಂತರ ಮುಖರ್ಜಿ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಬೀದರ್ ಮೂಲದ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ನರಸಾರೆಡ್ಡಿ ಭೀಮರೆಡ್ಡಿ ಅವರು ಪ್ರವಾಸದ ಸಮಯದಲ್ಲಿ ಅವರೊಂದಿಗೆ ಬಂದಿದ್ದರು.
ಸಂಸತ್ ಸದಸ್ಯರಾದ ಎಚ್.ವಿಶ್ವನಾಥ ಮತ್ತು ತಮಿಳುನಾಡಿನ ಹರೂನ್ ರಶೀದ್, ಕರ್ನಾಟಕ ಸಾಕ್ಷರತಾ ಮಿಷನ್ನ ಮಾಜಿ ಅಧ್ಯಕ್ಷ ಬಿ.ನಾರಾಯಣರಾವ್, ಕಾಂಗ್ರೆಸ್ ಮುಖಂಡರಾದ ಕೇಶವರಾವ್ ತಳಘಟಕರ್, ಮುರಳೀಧರ್ ಏಕಲಾರಕರ್ ಮತ್ತು ರಾಜಕುಮಾರಸಿಂಗ್ ಹಜಾರಿ ಇದ್ದರು.
ಘಟಿಕೋತ್ಸವದಲ್ಲಿ ಭಾಗಿ:ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾದ ನಂತರ 2015ರ ಡಿಸೆಂಬರ್ 22ರಂದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೀದರ್ ವಾಯುಪಡೆ ವಿಮಾನ ನಿಲ್ದಾಣಕ್ಕೆ ಬಂದು, ಇಲ್ಲಿಂದ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ಅಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಎಸ್ಪಿ ಸುಧೀರಕುಮಾರ್ ರೆಡ್ಡಿ ಸ್ವಾಗತಿಸಿ ಬರ ಮಾಡಿಕೊಂಡಿದ್ದರು.