ಬೀದರ್: ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು, ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರಿಗೆ ಸಲ್ಲಿಸಿದರು.
ಕೇಂದ್ರ ಸರ್ಕಾರವು ಆಗಸ್ಟ್ 10 ರಂದು ಸಂಸತ್ತಿನಲ್ಲಿ ಮಂಡಿಸಲಿರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಯಿಂದಾಗಿ ರೈತರು ಹಾಗೂ ವಿದ್ಯುತ್ ಬಳಕೆದಾರರು ತೊಂದರೆಗೆ ಒಳಗಾಗಲಿದ್ದಾರೆ ಎಂದು ಆರೋಪಿಸಿದರು.
ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ, ಮೊಬೈಲ್ ಪ್ರಿಪೇಯ್ಡ್ ಯೋಜನೆ ಮಾದರಿಯಲ್ಲಿ ವಿದ್ಯುತ್ ಬಳಕೆ ಪ್ರಸ್ತಾವಗಳನ್ನು ಮಸೂದೆ ಒಳಗೊಂಡಿದೆ ಎಂದು ದೂರಿದರು.
ಕೃಷಿ ಕಾಯ್ದೆಗಳಾದ ಒಪ್ಪಂದ ಕೃಷಿ, ಕೃಷಿ ಉತ್ಪನ್ನ ಮಾರುಕಟ್ಟೆ ಹೊರಗಡೆ ವ್ಯಾಪಾರಕ್ಕೆ ಅನುಮತಿ ಹಾಗೂ ಅವಶ್ಯಕ ವಸ್ತುಗಳ ಕಾಯ್ದೆ (ತಿದ್ದುಪಡಿ)ಗಳನ್ನು ಕೂಡಲೇ ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ನೀಡಿ, ಕಾಯ್ದೆಯಾಗಿ ರೂಪಿಸಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬು ಬಾಕಿ ಹಣ ಕೂಡಲೇ ಪಾವತಿಸಬೇಕು. ರೈತರ ಲಾರಿ ಹಾಗೂ ಹೊಲಗಳ ಮೇಲೆ ಸಾಲ ಪಡೆದ ಕೆಲ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮ್ಮದ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಖಮರ್ ಪಟೇಲ್, ಮುಖಂಡರಾದ ಬಸವರಾಜ ಪಾಟೀಲ, ಪ್ರಭು ತಗಣಿಕರ್, ಗುರುಪಾದಯ್ಯ ಸ್ವಾಮಿ ಪಾಲ್ಗೊಂಡಿದ್ದರು.