ಬೀದರ್: ‘ಸಕಾರಾತ್ಮಕ ಅಲೋಚನೆ ಸೃಜನಶೀಲ ಚಿಂತನೆಗೆ ಅನುವು ಮಾಡಿಕೊಡುತ್ತದೆ. ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಂಡು ಮುನ್ನಡೆದರೆ ಏನನ್ನು ಬೇಕಾದರೂ ಸಾಧಿಸಬಹುದು’ ಎಂದು ಬ್ರಿಮ್ಸ್ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಕುಣಕೇರಿ ತಿಳಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಬೀದರ್ನ ಐಎಂಎ ಹಾಲ್ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಸಕಾರಾತ್ಮಕ ಯೋಚನೆಗಳಿಗೆ ಪ್ರಾಮುಖ್ಯ ನೀಡಬೇಕು. ಪ್ರೇರಕ ಮಾತುಗಳನ್ನು ಆಲಿಸಬೇಕು,
ಇವು ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡುತ್ತವೆ’ ಎಂದು ಹೇಳಿದರು.
‘ಮಹಿಳೆಯರು ಇಂದು ಯಾವ ಕ್ಷೇತ್ರದಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ’ ಎಂದು ವಕೀಲೆ ಶಕುಂತಲಾ ತಂಬಾಕೆ ಸಲಹೆ ಮಾಡಿದರು.
‘ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ಸಮಸ್ಯೆಗಳಿಗೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದು ಪಿಎಸ್ಐ ಸಂಗೀತಾ ಹೇಳಿದರು.
‘ರೋಟರಿ ಕ್ಲಬ್ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಮಹಿಳೆಯರನ್ನು ಸಾಧನೆಗೆ ಪ್ರೇರೇಪಿಸಲು ಈ ಬಾರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಗಿದೆ’ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದರು.
ಎಲ್ಐಜಿ ಕಾಲೊನಿಯ ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಶಿಲ್ಪಾ ಬಹೆನ್ಜಿ ಕಾರ್ಯಕ್ರಮ ಉದ್ಘಾಟಿಸಿದರು. ಕೀರ್ತಿ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಖಜಾಂಚಿ ಡಾ. ರಿತೇಶ ಸುಲೆಗಾಂವ್ ಉಪಸ್ಥಿತರಿದ್ದರು. ರೂಪಾಲಿ ನಿತಿನ್ ಕರ್ಪೂರ್ ಹಾಗೂ ಶ್ರೀಶಾ ರಾವ್ ನಿರೂಪಿಸಿದರು.
45 ಮಂದಿ ಸಾಧಕಿಯರಿಗೆ ಸನ್ಮಾನ:ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ಐಎಂಎ ಹಾಲ್ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ 45 ಜನ ಸಾಧಕಿಯರನ್ನು ಸನ್ಮಾನಿಸಿ, ಪ್ರೋತ್ಸಾಹಿಸಿತು.
ಮಿಸಸ್ ಕ್ವೀನ್ ಆಫ್ ಇಂಡಿಯಾ ಅರುಣಾ ಪಾಟೀಲ, ಅಮೆರಿಕದ ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೊರ್ ರಾಯಭಾರಿ ಕೀರ್ತನಾ ಕೋಳೆಕರ್, ಎಫ್ಪಿಎಐ ರಾಷ್ಟ್ರೀಯ ಖಜಾಂಚಿ ಡಾ. ಆರತಿ ರಘು ಕೃಷ್ಣಮೂರ್ತಿ, ಶಿಲ್ಪಾ ಬಹೆನ್, ವಕೀಲೆ ಶಕುಂತಲಾ ತಂಬಾಕೆ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಮಾರ್ಕೇಟ್ ಪಿಎಸ್ಐ ಸಂಗೀತಾ ಎಸ್, ಬ್ರಿಮ್ಸ್ನ ಮನೋತಜ್ಞೆ ಡಾ. ಶ್ವೇತಾ ಕುಣಕೇರಿ, ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ, ಡಾ. ದಿವ್ಯ ಸಿ ರಗಟೆ, ಎಲ್ಐಸಿ ಎಟಿಸಿ ಪ್ರಾಚಾರ್ಯೆ ವಿದ್ಯಾವತಿ, ಪ್ರಾಚಾರ್ಯೆ ಶಾಮಲಾ ದತ್ತಾ, ನಿವೃತ್ತ ಶಿಕ್ಷಕಿ ಶೋಭಾ ಹಲಮಂಡಗೆ, ದಂತ ವೈದ್ಯೆ ಡಾ. ರಾಜಶ್ರೀ ಪಾಟೀಲ, ನಗರಸಭೆ ಸ್ವಚ್ಛತಾ ಸಿಬ್ಬಂದಿ ರಾಮವ್ವ ಶಂಕರ, ಎನ್ಇಕೆಆರ್ಟಿಸಿ ನಿರ್ವಾಹಕಿ ನಿರ್ಮಲಾ, ಹೋಟೆಲ್ ಉದ್ಯಮಿ ಮೋನಿಕಾ ಚಾವ್ಲಾ, ಶಿಕ್ಷಕಿ ಭಾರತಿ ಭಂಡೆ, ಎನ್ಸಿಸಿ ಕೆಡೆಟ್ ಗಂಗಾಂಬಿಕೆ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಪ್ರಮಾಣ ಪತ್ರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.