ವಾಂಜರಖೇಡ (ಹುಲಸೂರ): ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೆ, ಮಹಾರಾಷ್ಟ್ರದ ಧಣೆಗಾಂವ ಜಲಾಶಯದಿಂದ ನೀರು ಹರಿಬಿಟ್ಟ ಕಾರಣ ವಾಂಜರಖೇಡ ಸೇತುವೆ ಮುಳುಗಡೆಯಾಗಿದೆ. ಸಂಚಾರ ಸ್ಥಗಿತವಾಗಿದೆ.
ಸೇತುವೆಯ ಸುತ್ತಮುತ್ತಲ ಜಮೀನುಗಳಿಗೆ ನೀರು ನುಗ್ಗಿದೆ. ಜಮೀನಿಗೆ ನೀರು ನುಗ್ಗುತ್ತಿರುವುದು ಇದು ಮೂರನೇ ಬಾರಿ. ಆದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ವಾರಗಟ್ಟಲೇ ವಾಹನ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಹೊರಜಗತ್ತಿನ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಬದುಕು ನಡೆಸಬೇಕಾದ ಸ್ಥಿತಿ ಬಂದೊದಗಿದೆ. ಜಿಲ್ಲಾಡಳಿತ ಸಂಪರ್ಕ ಸೇತುವೆಯನ್ನು ಎತ್ತರಿಸಬೇಕು’ ಎಂದು ವಾಂಜರಖೇಡ ಗ್ರಾಮದ ಮುಖಂಡ ಶಿವರಾಜ ಮೂಳೆ ಮನವಿ ಮಾಡಿದರು.