ಭಾಲ್ಕಿ: ‘ಸುಮಾರು 60 ವರ್ಷದಿಂದ ರಾಜಕಾರಣ ಮಾಡುತ್ತಿರುವ ಈಶ್ವರ ಖಂಡ್ರೆ ಕುಟುಂಬ, ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾಡಿದೆ, ಹೊರತು ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ’ ಎಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಭಗವಂತ ಖೂಬಾ ಆರೋಪಿಸಿದರು.
ತಾಲ್ಲೂಕಿನ ನಿಟ್ಟೂರ, ಹಲಬರ್ಗಾದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,‘ಸಾವಿರಾರು ಎಕರೆ ಭೂಮಿ ಸಂಪಾದಿಸಿದ್ದಾರೆ. ಅವುಗಳಿಗೆ 30 ಅಡಿ ಎತ್ತರ 5 ಅಡಿ ಅಗಲದ ಕರಿ ಕಲ್ಲಿನ ಕಾಂಪೌಂಡ್ ಕಟ್ಟುತ್ತಾ ಓಡಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸ್ಟೇಡಿಯಂ ನಿರ್ಮಿಸಲು ಯೋಗ್ಯತೆ ಇಲ್ಲದ ಈಶ್ವರ ಖಂಡ್ರೆಗೆ ನನ್ನ ಅಭಿವೃದ್ಧಿ ಬಗ್ಗೆ ಸುಳ್ಳು ಆರೋಪ ಮಾಡಲು ನಾಚಿಕೆಯಾಗಬೇಕು’ ಎಂದರು.
‘ವೀರಶೈವ ಲಿಂಗಾಯತರ ಉದ್ಧಾರಕ್ಕೆ ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಈಶ್ವರ ಖಂಡ್ರೆ ಅವರ ಕೊಡುಗೆ ಶೂನ್ಯ. ವೀರಶೈವ ಲಿಂಗಾಯತರ ಮಕ್ಕಳಿಗಾಗಿ ಇವರಿಂದ ಒಂದು ಹಾಸ್ಟೆಲ್ ಕಟ್ಟಿಸಲು ಆಗಿಲ್ಲಾ. ಕೇವಲ ಮತಗಳಿಕೆಗಾಗಿ ವೀರಶೈವ ಲಿಂಗಾಯತರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಚುನಾವಣೆಯಲ್ಲಿ ಲಿಂಗಾಯತರು ಈಶ್ವರ ಖಂಡ್ರೆ ಅವರನ್ನು ಬೆಂಬಲಿಸಬಾರದು. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿರುವೆ. ಹಾಗಾಗಿ, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ 3ನೇ ಬಾರಿಗೆ ಸಂಸದನಾಗಿ ಇನ್ನಷ್ಟು ಸೇವೆ ಮಾಡಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪ್ರಮುಖರಾದ ಎಂ.ಜಿ. ಮೂಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ, ಶಿವರಾಜ ಗಂದಗೆ, ಶ್ರೀಕಾಂತ ದಾನಿ, ದಿಗಂಬರ ಮಾನಕಾರಿ, ಉದಯ ಮೂಲಗೆ, ಸತೀಶ ಪಾಟೀಲ, ವೈಜಿನಾಥ ಮೂಲಗೆ, ಮಹೇಶ ಸ್ವಾಮಿ ಇದ್ದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಭಗವಂತ ಖೂಬಾ ಮತಯಾಚನೆ ಮಾಡಿದರು