ಹುಮನಾಬಾದ್: ಹೈದ್ರಬಾದ್ ಕರ್ನಾಟಕ ಅಭಿವೃದ್ದಿ ಶಿಕ್ಷಣ ಟ್ರಸ್ಟ್ ವತಿಯಿಂದ ಸಮೀಪದ ಮಾಣಿಕನಗರದ ಮಾಣಿಕಸೌಧದಲ್ಲಿ ಸೋಮವಾರ ದಂತ ಶಿಕ್ಷಣ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಜರುಗಿತು.
ಶಾಸಕ ರಾಜಶೇಖರ ಪಾಟೀಲ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ,‘ಈ ಭಾಗದ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ದಿ.ಬಸವರಾಜ ಪಾಟೀಲ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ’ ಎಂದರು.
ಹುಮನಾಬಾದ್ ಪಟ್ಟಣದಲ್ಲಿ 1978ರಿಂದ ವಿವಿಧ ಪದವಿ ಕಾಲೇಜು, ಪಿಯುಸಿ, ಡೆಂಟಲ್, ಫಾರ್ಮಸಿ, ಐಟಿಐ, ಆರ್ಯುವೇದ ಸೇರಿದಂತೆ ವಿವಿಧ ಕಾಲೇಜು ಸ್ಥಾಪಿಸಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಮ್ಮ ಭಾಗದಲ್ಲಿ ರಾಷ್ಟ್ರಮಟ್ಟದ ದಂತ ಶಿಕ್ಷಣ ವಿಚಾರ ಸಂಕಿರಣ ಆಯೋಜಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ವಿಚಾರ ಸಂಕಿರಣದ ಲಾಭ ಪಡೆದು, ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕರು ಡಿಸಿಐ ಮಾಜಿ ಸದಸ್ಯ ಡಾ. ಸುಧಾಕರ ಎಂ.ಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಮಾತನಾಡಿದರು. ಡಾ.ಶಿವಶರಣ ಕೆ. ಡಾ. ವಿನಯಕುಮಾರ ಹಿರೇಮಠ, ಡಾ.ಸತೀಶ ಪಾಟೀಲ, ಡಾ. ಸುಧೀರ ಹೊಂಗಲ್ ಇದ್ದರು.