ಬೀದರ್: ಡಾ. ಶಿವಕುಮಾರ ಸ್ವಾಮೀಜಿ ಅವರ 77ನೇ ಜಯಂತಿ ಮಹೋತ್ಸವ ಇಲ್ಲಿಯ ಸಿದ್ಧಾರೂಢ ಮಠದ ಚಿದಂಬರಾಶ್ರಮದಲ್ಲಿ ಶುಕ್ರವಾರ ಆರಂಭಗೊಂಡಿತು.
ಬೆಳಿಗ್ಗೆ ಮಠದ ಸಾಧಕ, ಸಾಧಕಿಯರಿಂದ ಜಪ, ಧ್ಯಾನ, ಸಿದ್ಧಾರೂಢರ ಚರಿತ್ರೆ ಪಾರಾಯಣ ನಡೆದವು. ಜ್ಞಾನವಾದರೆ ಸಮಾಧಾನ: ಜಯಂತಿ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಡಾ. ಶಿವಕುಮಾರ ಸ್ವಾಮೀಜಿ ಅವರು, ಮನುಷ್ಯನಿಗೆ ಪರಮ ಜ್ಞಾನವಾದರೆ ಜೀವನದಲ್ಲಿ ನಿಜವಾದ ಸಮಾಧಾನ, ಶಾಂತಿ ದೊರಕುತ್ತದೆ ಎಂದು ಹೇಳಿದರು.
ಜ್ಞಾನದ ಜತೆಗೆ ಅಜ್ಞಾನವೂ ಇರುತ್ತದೆ. ಸಮಸ್ತ ವ್ಯವಹಾರಗಳು ಜ್ಞಾನದಲ್ಲೇ ನಡೆಯುತ್ತವೆ. ನನಗೆ ತಿಳಿದಿಲ್ಲ ಎನ್ನುವುದೇ ಅಜ್ಞಾನ ಎಂದು ನುಡಿದರು.ಬದುಕು ಸಾರ್ಥಕಕ್ಕೆ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.
ಕಲಬುರ್ಗಿಯ ಮಾತೆ ಲಕ್ಷ್ಮೀದೇವಿ ಮಾತನಾಡಿ, ಜಗತ್ತು, ಜೀವ, ಶರೀರ ಇವೆಲ್ಲವೂ ಮಾಯಾ ಸ್ವರೂಪಗಳೇ ಎಂದು ಹೇಳಿದರು.
ಶರೀರ ಪಂಚಭೂತಾತ್ಮಕ. ಅವ್ಯಕ್ತ ಪಂಚಭೂತದೊಳಗೆ ವ್ಯಕ್ತವಾಗಿದೆ. ಪುನಃ ಅವ್ಯಕ್ತದೊಳಗೇ ಮಾಯವಾಗುವುದು. ಜ್ಞಾನದ ರಸಹ್ಯ ತಿಳಿಯಲು ಗುರುಕೃಪೆಯೇ ಬೇಕು ಎಂದು ತಿಳಿಸಿದರು.
ಬಸವಾನಂದ ಸ್ವಾಮೀಜಿ ಮಾತನಾಡಿ, ಎಲ್ಲಿಯವರೆಗೆ ಅಜ್ಞಾನ ಕಳೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ದುಃಖದಿಂದ ಪಾರಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಶರಣರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿದ್ದಾರೆ ಎಂದು ಹೇಳಿದರು.
ದುಃಖ ನಿವಾರಣೆಗೆ ಪುಣ್ಯವನ್ನೇ ಮಾಡಬೇಕು. ರಾಗ-ದ್ವೇಷ ರಹಿತನಾಗಿರಬೇಕು ಎಂದು ಸಲಹೆ ಮಾಡಿದರು.