ಬೀದರ್: ಹೊಲದಲ್ಲಿರುವ ರೈತರು ಹಾಗೂ ಕುರಿಗಾಹಿಗಳು ಗುಡುಗು, ಮಿಂಚು ಅಥವಾ ಸಿಡಿಲಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ, ಇನ್ನು ಮುಂದೆ ಅಂಗೈನಲ್ಲೇ ಸಿಡಿಲಿನ ಮುನ್ಸೂಚನೆ ಸಿಗಲಿದೆ.
ಮಿಂಚು ಹಾಗೂ ಸಿಡಿಲು ಎಲ್ಲಿ ಬೀಳಲಿದೆ ಎನ್ನುವ ಮುನ್ಸೂಚನೆಯನ್ನು ನಿಂತ ಜಾಗದಲ್ಲೇ ಮೊಬೈಲ್ನಲ್ಲಿ ಪಡೆಯಬಹುದು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈಚೆಗೆ ‘ಸಿಡಿಲು’ ಆ್ಯಪ್ ಬಿಡುಗಡೆ ಮಾಡಿದ್ದು, ಅಂತರ್ಜಾಲ ಆಧಾರಿತ ಈ ಆ್ಯಪ್, ಗೂಗಲ್ ಮ್ಯಾಪ್, ಜಿಪಿಎಸ್ ಬಳಸಿಕೊಂಡು ಗ್ರಾಹಕನ ಸ್ಥಳವನ್ನು ಪತ್ತೆ ಮಾಡಿಕೊಳ್ಳುತ್ತದೆ. ಸಿಡಿಲು ಬರುವ ಅರ್ಧಗಂಟೆ ಮೊದಲು ಸಂದೇಶ ರವಾನಿಸುತ್ತದೆ. ಇದರಿಂದ ಸಂಭವನೀಯ ಅಪಾಯದಿಂದ ಪಾರಾಗಲು ಸಾಧ್ಯವಾಗಲಿದೆ.
ಸಿಡಿಲು ಆ್ಯಪ್ ಡೌನ್ಲೋಡ್ ಹೀಗೆ:ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಪ್ಲೇ ಸ್ಟೋರ್ಗೆ ಹೋಗಿ ಸಿಡಿಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಮೊಬೈಲ್ ನಂಬರ್ ಟೈಪ್ ಮಾಡಬೇಕು. ಈ ಸಂಖ್ಯೆಗೆ ಬರುವ ಒಟಿಪಿಯನ್ನು ಪ್ರವೇಶಿಸುತ್ತಿದ್ದಂತೆಯೇ ಆ್ಯಪ್ ತೆರೆದುಕೊಳ್ಳುತ್ತದೆ. ಜಿಪಿಎಸ್ ಮತ್ತು ಇಂಟರ್ನೆಟ್ ಸಂಪರ್ಕ ಪಡೆದು ಆ್ಯಪ್ ಕಾರ್ಯ ನಿರ್ವಹಿಸುತ್ತದೆ.
ರಾಜ್ಯದ ವಿವಿಧೆಡೆ ಸಿಡಿಲು ಮುನ್ಸೂಚನೆಯ ಸೆನ್ಸರ್ಗಳಿವೆ. ಅವುಗಳಿಂದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುಖ್ಯ ಕಚೇರಿಗೆ ಮಾಹಿತಿ ರವಾನೆಯಾಗುತ್ತದೆ. ಮಾಹಿತಿ ಕೇಂದ್ರದಿಂದ ಅರ್ಧ ಗಂಟೆ ಮೊದಲು ಸಂದೇಶ ರವಾನೆಯಾಗುತ್ತದೆ.
ಆ್ಯಪ್ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ದೊರೆಯಲಿದೆ. ಆ್ಯಪ್ನಲ್ಲಿ ಮಿಂಚು, ಗುಡುಗು ಹಾಗೂ ಮಳೆ–ಹೀಗೆ ಮೂರು ವಿಭಾಗಗಳು ತೆರೆದುಕೊಳ್ಳುತ್ತವೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡಿರುವ ವ್ಯಕ್ತಿಗೆ 5 ಕಿಲೊಮೀಟರ್ ವ್ಯಾಪ್ತಿಯಲ್ಲಿನ ಮುನ್ಸೂಚನೆ ಸಿಗಲಿದೆ.
ಆ್ಯಪ್ನಲ್ಲಿ ಮಿಂಚು ಬರುವಾಗ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಲಾಗಿದೆ. ಸಿಡಿಲು ಆ್ಯಪ್ ಬಣ್ಣಗಳ ಮೂಲಕ ಮುನ್ಸೂಚನೆ ನೀಡುತ್ತದೆ. ಡಿಟಿಎ ಚಿತ್ರ ಹಾಗೂ ಆ್ಯಪ್ನ ಮೇಲ್ಭಾಗದಲ್ಲಿ ಕೇಸರಿ ಬಣ್ಣ ಕಾಣಿಸಿಕೊಂಡರೆ ವ್ಯಕ್ತಿಯು ಮಿಂಚು ಬರಲಿರುವ ಪ್ರದೇಶದಿಂದ 1 ರಿಂದ 5 ಕಿಲೊಮೀಟರ್ ದೂರದಲ್ಲಿದ್ದು, ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಹಳದಿ ಬಣ್ಣ ಬಂದರೆ ಮಿಂಚು ಬರಲಿರುವ ಪ್ರದೇಶದಿಂದ 5ರಿಂದ 15 ಕಿಲೊಮೀಟರ್ ದೂರದಲ್ಲಿರುವುದನ್ನು ಸೂಚಿಸುತ್ತದೆ. ನೀಲಿ ಬಣ್ಣ ಇದ್ದರೆ ಸುರಕ್ಷಿತ ಪ್ರದೇಶದಲ್ಲಿದ್ದಾನೆ ಎಂದು ತಿಳಿದುಕೊಳ್ಳಬೇಕು.
ರಾಜ್ಯದಲ್ಲಿ ಪ್ರತಿ ವರ್ಷ 60-70 ಜನ ಸಿಡಿಲು ಬಡಿದು ಸಾವಿಗೀಡಾಗುತ್ತಿದ್ದಾರೆ.
ಗ್ರಾಮಗಳಲ್ಲಿ ‘ಸಿಡಿಲು’ ಜಾಗೃತಿ
‘ಬೀದರ್ ಜಿಲ್ಲೆಯಲ್ಲಿ ‘ಸಿಡಿಲು’ ಆ್ಯಪ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿವಳಿಕೆ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿ ತಿಳಿವಳಿಕೆ ನೀಡವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ವಿಜ್ಞಾನಿ ಗಂಗಾಧರ ಮಠ ಹೇಳಿದರು.
‘ಸಾಮಾನ್ಯ ಮೊಬೈಲ್ ಇದ್ದರೂ ತೊಂದರೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿರುವವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಪಿಡಿಒಗಳಿಗೆ ಕೊಟ್ಟರೆ ಅವರು ನಮ್ಮ ಕೇಂದ್ರಕ್ಕೆ ಕಳಿಸಿಕೊಡಲಿದ್ದಾರೆ. ನೋಂದಾಯಿತರಿಗೆ ಸಂದೇಶ ರವಾನೆಯಾಗಲಿದೆ’ ಎನ್ನುತ್ತಾರೆ.
‘ನಮ್ಮ ಕೇಂದ್ರದಲ್ಲಿ 10 ಲಕ್ಷ ರೈತರ ಮೊಬೈಲ್ ಸಂಖ್ಯೆಗಳಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೂ ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗುತ್ತಿದೆ. ಒಟ್ಟಾರೆ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸುವುದೇ ಇದರ ಉದ್ದೇಶವಾಗಿದೆ’ ಎಂದು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.