ಲಖನೌ: ಆಗ್ರಾದ ನಗರ ಪಾಲಿಕೆಯಲ್ಲಿ ವಿವಿಧ ರೀತಿಯ ಕೆಲಸಗಳಿಗೆ ಅಧಿಕಾರಿಗಳು ಪಡೆಯುವ ಲಂಚದ ಮಾಹಿತಿ ಉಳ್ಳ ಪತ್ರವನ್ನು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ರಾಜ್ಯದ ಲೋಕೋಪಯೋಗಿ ಸಚಿವರಿಗೆ ಕಳುಹಿಸಿದ್ದು, ಈ ಮೂಲಕ ತಮ್ಮದೇ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಪತ್ರದ ಪ್ರಕಾರ ಪಾಲಿಕೆ ಆಯುಕ್ತರಿಂದ ಎಂಜಿನಿಯರ್, ಗುಮಾಸ್ತರ ತನಕವೂ ಹುದ್ದೆ ಆಧಾರದ ಮೇಲೆ ಪಡೆಯುವ ಲಂಚದ ಮೊತ್ತ ವ್ಯತ್ಯಾಸವಾಗುತ್ತದೆ.
‘ಅಧಿಕಾರಿಗಳು ಪಡೆಯುವ ಭಾರಿ ಮೊತ್ತದ ಲಂಚದಿಂದಾಗಿ ಯೋಜನೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಪದ್ಧತಿಗೆ ತಕ್ಷಣವೇ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರಿಗೆ ಗರ್ಗ್ ಮನವಿ ಮಾಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ಇಳಿಕೆ: ಆದರೆ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮಾಣ ಇಳಿಕೆಯಾಗಿದೆ ಎಂದು ಗರ್ಗ್ ಹೇಳಿದ್ದಾರೆ. ‘ಈ ಮೊದಲು ಶೇ 32 ಇದ್ದ ಲಂಚದ ಪ್ರಮಾಣ ಈಗ ಶೇ 27 ಆಗಿದೆ. ಶೇ 5ರಷ್ಟು ಲಂಚದ ಪ್ರಮಾಣ ಇಳಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಆಕ್ಷೇಪ: ಗರ್ಗ್ ತಮ್ಮ ಪತ್ರವನ್ನು ಬಹಿರಂಗಪಡಿಸಬಾರದಿತ್ತು ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಿದ್ದಾರೆ.