ಬೀದರ್: ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ಮೇಲೆ ಪಿಎಸ್ಐ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ವಶಕ್ಕೆ ಪಡೆದುಕೊಂಡ ಘಟನೆ ಭಾನುವಾರ ಹುಮನಾಬಾದ್ ಹೊರವಲಯದಲ್ಲಿ ನಡೆದಿದೆ.
ಬೀದರ್ನ ಇರಾನಿ ಗಲ್ಲಿಯ ಜಾವೇದ್ ಖಾನ್ ಮತ್ತು ಶಾದುಲ್ಲಾ ಬಂಧಿತ ಆರೋಪಿಗಳು.
ಸರಗಳ್ಳರು ಬೈಕ್ನಲ್ಲಿ ಹುಮನಾಬಾದ್ನತ್ತ ಹೊರಟಿರುವ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಹುಮನಾಬಾದ್ ಪೊಲೀಸ್ ಠಾಣೆ ಪಿಎಸ್ಐಗಳಾದ ರವಿಕುಮಾರ, ಕಿರಣಕುಮಾರ ನೇತೃತ್ವದ ತಂಡ ಹೆದ್ದಾರಿಯಲ್ಲಿ ನಿಗಾ ವಹಿಸಿತ್ತು.
ಬೈಕ್ ತಡೆಯಲು ಮುಂದಾದಾಗ, ಆರೋಪಿಗಳು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರು. ಆಗ ರವಿಕುಮಾರ ಗಾಳಿಯಲ್ಲಿ ಗುಂಡು ಹಾರಿಸಿದರು. ರವಿಕುಮಾರ, ಕಿರಣಕುಮಾರ, ಕಾನ್ಸ್ಟೆಬಲ್ ಭಗವಾನ ಮತ್ತು ನವೀನ್ ಅವರಿಗೆ ಗಾಯಗಳಾಗಿವೆ.
ಜಿಲ್ಲಾ ಹೆಚ್ಚುವರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡಿ, ಡಿವೈಎಸ್ಪಿ ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.