ಬೀದರ್: ಹಿಂದೂಗಳು ಗಣೇಶನ ಹಬ್ಬದ ಸಂಭ್ರಮದಲ್ಲಿದ್ದರೆ, ಮುಸ್ಲಿಂರು ಮೊಹರಂಗೆ ಸಿದ್ಧತೆ ನಡೆಸಿದ್ದಾರೆ. ಹಬ್ಬಗಳ ಅಬ್ಬರದಲ್ಲಿ ತರಕಾರಿ ಬೆಲೆ ಪಾದರಸದಂತೆ ಇಳಿದಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಿದೆ.
ಸಾಮಾನ್ಯವಾಗಿ ಗಣಪತಿಗೆ ನೈವೇದ್ಯ ಸಮರ್ಪಿಸಲು ಭಕ್ತರು ಖರೀದಿಸುತ್ತಿದ್ದ ಸೊಪ್ಪಿನ ಬೆಲೆ ಹೆಚ್ಚಾಗಿಲ್ಲ. ಈ ವಾರ ನಗರದಲ್ಲಿ ಬಹುತೇಕ ತರಕಾರಿಗಳ ಬೆಲೆ ಪ್ರತಿ ಕ್ವಿಂಟಲ್ಗೆ ₹ 500 ರಿಂದ ಒಂದು ಸಾವಿರ ರೂಪಾಯಿ ವರೆಗೆ ಕುಸಿದಿದೆ.
ಜಿಲ್ಲೆಯ ಜನರ ನೆಚ್ಚಿನ ಬದನೆಕಾಯಿ, ಬೀನ್ಸ್, ಈರುಳ್ಳಿ, ಎಲೆಕೋಸು ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಮಾತ್ರ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಗಿದೆ. ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಹೂಕೋಸು, ಬಿಟ್ರೂಟ್, ಬೆಂಡೆಕಾಯಿ ಹಾಗೂ ಕರಿಬೇವು ಬೆಲೆ ಈ ವಾರವೂ ಸ್ಥಿರವಾಗಿದೆ.
ಗಜ್ಜರಿ, ತೊಂಡೆಕಾಯಿ ಹಾಗೂ ಪಾಲಕ್ ಬೆಲೆ ಮಾತ್ರ ಪ್ರತಿ ಕ್ವಿಂಟಲ್ಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ಹಿರೇಕಾಯಿ, ಟೊಮೆಟೊ, ಗಜ್ಜರಿ, ಕೊತಂಬರಿ, ಪಾಲಕ್ ಹಾಗೂ ಮೆಂತೆ ಸೊಪ್ಪಿನ ಬೆಲೆ ₹ 500 ರ ವರೆಗೆ ಕುಸಿದಿದೆ. ಶ್ರಾವಣದಲ್ಲಿ ತರಕಾರಿ ಬೆಲೆ ಕೊಂಚ ಹೆಚ್ಚಾಗಿತ್ತು. ಶ್ರಾವಣ ಮಾಸ ಅಂತ್ಯಗೊಳ್ಳುತ್ತಿದ್ದಂತೆಯೇ ಭಾದ್ರಪದ ಶುರುವಾಗಿದೆ. ಈ ಮಾಸದ ಮೊದಲ ವಾರ ತರಕಾರಿಗೆ ಅಧಿಕ ಬೇಡಿಕೆ ಇರುತ್ತದೆ. ಆದರೆ, ಈ ಬಾರಿ ಗ್ರಾಹಕರಿಂದ ನಿರೀಕ್ಷೆಯಷ್ಟು ಬೇಡಿಕೆಯೂ ಬಂದಿಲ್ಲ.
ರೆಸ್ಟೋರಂಟ್, ಹೋಟೆಲ್, ಖಾನಾವಳಿ ಮಾಲೀಕರು ಅಗ್ಗದ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡೊಯ್ದಿದ್ದಾರೆ. ವಾರದ ವರೆಗೆ ಸಂಗ್ರಹಿಸಿ ಇಡಬಹುದಾದ ಹಿರೇಕಾಯಿ, ತೊಂಡೆಕಾಯಿ. ಆಲೂಗಡ್ಡೆಯನ್ನು ಹೆಚ್ಚು ಖರೀದಿಸಿದ್ದಾರೆ.
ಬೀದರ್ ಮಾರುಕಟ್ಟೆಗೆ ಹೈದರಾಬಾದ್ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಟೊಮೆಟೊ, ಹಸಿ ಮೆಣಸಿನಕಾಯಿ, ಮಹಾರಾಷ್ಟ್ರದ ಸೋಲಾಪುರದಿದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಆವಕವಾಗಿದೆ.
ಚಿಟಗುಪ್ಪ ತಾಲ್ಲೂಕಿನಿಂದ ಹೂಕೋಸು, ಮೆಂತೆ ಸೊಪ್ಪು, ಪಾಲಕ್, ಕರಿಬೇವು, ಬೆಂಡೆಕಾಯಿ, ಹಿರೇಕಾಯಿ ಮಾರುಕಟ್ಟೆಗೆ ಬಂದಿದೆ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಹೂಗೇರಿ ಹೇಳುತ್ತಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.