ಕೊಹಿನೂರವಾಡಿ (ಬಸವಕಲ್ಯಾಣ): ‘ಕ್ಷೇತ್ರದ ಮತದಾರರು ಸ್ವಾಭಿಮಾನದಿಂದ ಮತ ಚಲಾಯಿಸಬೇಕು. ಹೊರಗಿನವರನ್ನು ಗೆಲ್ಲಿಸಬಾರದು ಎಂಬ ಉದ್ದೇಶದಿಂದ ನಾನು ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕು’ ಎಂದು ಈ ಕ್ಷೇತ್ರದ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕೇಳಿಕೊಂಡರು.
ವಿಧಾನಸಭಾ ಕ್ಷೇತ್ರದ ಕೊಹಿನೂರವಾಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.
‘ನಾನು ಎರಡು ಸಲ ಶಾಸಕನಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದೇನೆ. ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದೆ. ಈ ಸಲವೂ ಟಿಕೆಟ್ ದೊರಕಬಹುದು ಎಂಬ ಭರವಸೆ ಇತ್ತು. ಆದರೆ, ಅನ್ಯರನ್ನು ಕಣಕ್ಕೆ ಇಳಿಸಿದ್ದರಿಂದ ಕ್ಷೇತ್ರದ ಸ್ವಾಭಿಮಾನಿ ಬಳಗದವರು ನನ್ನನ್ನು ಕಣದಿಂದ ಹಿಂದಕ್ಕೆ ಸರಿಯ ದಂತೆ ಒತ್ತಡ ಹೇರಿದರು’ ಎಂದರು.
‘ಕ್ಷೇತ್ರದಲ್ಲಿ ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿದೆ. ಸರ್ವರೊಂದಿಗೆ ಸಂಪರ್ಕದಲ್ಲಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಮಾಡುವುದೂ ಇಲ್ಲ. ಆದ್ದರಿಂದ ಈ ಸಲ ಯಾರೂ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು’ ಎಂದರು.