ಬಸವಕಲ್ಯಾಣ: ‘ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ನಡುವೆ ಕಮಿಷನ್ಗಾಗಿ ಜಗಳ ಹುಟ್ಟಿಕೊಂಡಿದ್ದು, ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲ್ಲೂಕಿನ ಸಸ್ತಾಪುರದಲ್ಲಿ ವಿಧಾನಸಭಾ ಉಪ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಪರ ಸೋಮವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಅವರದೇ ಪಕ್ಷದ ಬಸವರಾಜ ಪಾಟೀಲ ಯತ್ನಾಳ ಅವರೇ ಯಡಿಯೂರಪ್ಪ ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರ ಅಸ್ಥಿರವಾಗಿದೆ’ ಎಂದರು.
‘ಕಾಂಗ್ರೆಸ್ ಜಾರಿಗೊಳಿಸಿದ ನರೇಗಾ ನಾನು ನೀಡಿದ ಉಚಿತ ಅಕ್ಕಿ ಇಲ್ಲದಿದ್ದರೆ ಕೊರೊನಾದಲ್ಲಿ ಜನರ ಪರಿಸ್ಥಿತಿ ಏನಾಗುತ್ತಿತ್ತು. ಮೋದಿ ಅವರು ಬರೀ ಮನಕಿ ಬಾತ್, ಅಚ್ಚೆ ದಿನ ಅಂತಾರೆ, ಮನಕಿ ಬಾತ್ ನಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತಾಡಿದ್ದಾರಾ’ ಎಂದು ಪ್ರಶ್ನಿಸಿದರು.