ಚಿತ್ತಾಪುರ: ಯುವತಿಯನ್ನು ಅಪಹರಿಸಿ ಮನೆಯಲ್ಲಿ ಇಟ್ಟುಕೊಂಡು ಅತ್ಯಾಚಾರ ಮಾಡಿದ ಘಟನೆ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ. ಅತ್ಯಾಚಾರ ಮಾಡಿರುವ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಕಲಗುರ್ತಿ ಗ್ರಾಮದ 23 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಆರೋಪಿ ಚಿತ್ತಾಪುರದ ಮಹೇಶ ಚಂದ್ರಶೇಖರ ಬಟಗಿರಿ ವಿರುದ್ಧ ಯುವತಿ ಶನಿವಾರ ನೀಡಿರುವ ದೂರನ್ನು ಆಧರಿಸಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಮಧ್ಯಾಹ್ನ ಆರೋಪಿಯನ್ನು ತಹಶೀಲ್ದಾರ್ ಕಚೇರಿ ಹತ್ತಿರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
`ಬಿ.ಇಡಿ. ವ್ಯಾಸಾಂಗಕ್ಕೆಂದು ಚಿತ್ತಾಪುರಕ್ಕೆ ಬರುತ್ತಿದ್ದ ನಾನು ಆಗಾಗ ಮಹೇಶನ ಝೆರಾಕ್ಸ್ ಅಂಗಡಿಗೆ ಹೋಗುತ್ತಿದ್ದೆ. ಆಗ ಪರಿಚಯ ಮಾಡಿಕೊಂಡಿದ್ದ ಆತ ನನ್ನ ಮೊಬೈಲ್ ಸಂಖ್ಯೆ ಪಡೆದು ಆಗಾಗ ಮಾತನಾಡುತ್ತಿದ್ದ. 2013ರ ಫೆ.19ರಂದು ಮನೆಗೆ ಕರೆದು ಅತ್ಯಾಚಾರ ಮಾಡಿದ್ದಾನೆ.
ನಂತರ ಜೂನ್ 26 ರಂದು ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಾಗ ಸ್ಕಾರ್ಪಿಯೋ ವಾಹನ ತಂದು, ಒತ್ತಾಯ ಮಾಡಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದಿಗೆ ಕರೆದುಕೊಂಡು ಹೋಗಿದ್ದಾನೆ. ಒಂದು ದಿನ ಅ್ಲ್ಲಲೇ ಇರಿಸಿಕೊಂಡು ಕೆಲವು ಕಾಗದ ಪತ್ರಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ' ಎಂದು ಯುವತಿ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.