ಹುಮನಾಬಾದ್: ತರಬೇತಿಯಿಂದ ಪರಿಣಾಮಕಾರಿ ಬೋಧನೆ ಸಾಧ್ಯ ಎಂದು ಬಿ.ಆರ್.ಪಿ ಸಂಜೀವಕುಮಾರ ಸಲಹೆ ನೀಡಿದರು. ನಗರದ ಬಿ.ಆರ್ಸಿ ಕಚೇರಿಯಲ್ಲಿ ವಿಷಯ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕನ್ನಡವನ್ನು ಕಡೆಗಣಿಸದೆ ಅತ್ಯಂತ ಸೂಕ್ಷ್ಮವಾಗಿ ಬೋಧಿಸಬೇಕು ಎಂದು ಹೇಳಿದರು.
ಬೆರಳೆಣಿಕೆ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೇ ಶೇ 90ರಷ್ಟು ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡದಲ್ಲಿ ಕಡಿಮೆ ಅಂಕ ಗಳಿಸುತ್ತಿರುವುದು ವಿಪರ್ಯಾಸ. ಮಕ್ಕಳಿಗೆ ಮೂಲಾಕ್ಷರ, ವ್ಯಾಕರಣ, ಸಮರ್ಪಕ ಚಿಹ್ನೆಗಳ ಬಳಕೆ, ವಾಕ್ಯ ರಚನೆ, ಅರ್ಥಪೂರ್ಣ ವಿಷಯ ಬೋಧನೆಯಿಂದ ವಿದ್ಯಾರ್ಥಿಗಳು ಅತ್ಯಧಿಕ ಅಂಕ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಹಿಂದಿ ವಿಷಯ ಸಂಪನ್ಮೂಲ ವ್ಯಕ್ತಿ ದೀಲಿಪಕುಮಾರ ಗಾಯಕವಾಡ ಅವರು ಮಾತನಾಡಿ, 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಸುವ ವಿಧಾನ ಕುರಿತು ಮಾರ್ಗದರ್ಶನ ನೀಡುತ್ತಿದ್ದು, ಶಿಕ್ಷಕರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಿ.ಆರ್.ಪಿ ಶಿವಶಂಕರ, ಅಶೋಕಕುಮಾರ, ಖಾದ್ರಿ ಇದ್ದರು.