ಜನವಾಡ: ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಆರ್ಆರ್ಕೆ ಸಮಿತಿಯ ಅಧ್ಯಕ್ಷ ರಮೇಶಕುಮಾರ ಪಾಂಡೆ ನುಡಿದರು.
ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದಲ್ಲಿ ಬುಧವಾರ ಆರ್ಆರ್ಕೆ ಸಮಿತಿಯ ಸಂಚಾಲಿತ ಸ್ವತಂತ್ರ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವ ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಾರಿಗೆ ಸೌಕರ್ಯ ಇರುತ್ತದೆಯೋ ಆ ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ಜಾತಿ ಪದ್ಧತಿ ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಶಿಬಿರವನ್ನು ಉದ್ಘಾಟಿಸಿದ ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಅಂಬ್ರೆಪ್ಪ ಎಂ. ತಿಳಿಸಿದರು.
ಯುವಕರು ದುಶ್ಚಟಗಳಿಂದ ದೂರ ಇರಬೇಕು. ಗ್ರಾಮದಲ್ಲಿ ನೈರ್ಮಲ್ಯಕ್ಕೆ ಒತ್ತು ಕೊಡಬೇಕು. ಸೇವಾ ಮನೋಭಾ ವ ಮೈಗೂಡಿಸಿಕೊಳ್ಳಬೇಕು ಎಂದು ದತ್ತಗಿರಿ ಮಹಾರಾಜ ಕನ್ನಡ ಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಜಯದೇವಿ ಯದಲಾಪುರೆ ಹೇಳಿದರು.
ಆರ್ಆರ್ಕೆ ಸಮಿತಿಯ ಕಾರ್ಯ ದರ್ಶಿ ಧನರಾಜ ತಾಂಡೂರೆ, ಕೋಶಾ ಧ್ಯಕ್ಷ ಹಣಮಂತರಾವ್ ಬರ್ಗೆ, ಅಲಿ ಯಾಬಾದ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾಬಾಯಿ ಅನಿಲಕುಮಾರ, ಸದಸ್ಯೆ ಗೋದಾವರಿ ವಿಶ್ವನಾಥ ಇದ್ದರು. ಪ್ರಾಚಾರ್ಯ ಡಾ. ಬಂಡಯ್ಯ ಸ್ವಾಮಿ ಸ್ವಾಗತಿಸಿ, ಸುನಿತಾ ಕೂಡ್ಲಿಕರ್ ನಿರೂ ಪಿಸಿದರು. ಬೇಬಿ ಚಿದ್ರೆ ವಂದಿಸಿದರು.