ಭಾಲ್ಕಿ: ಸಾಮಾಜಿಕ ಸಮಾನತೆ, ವಿಶ್ವಭಾತೃತ್ವ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರಿರುವ ಬಸವ ಸಾಹಿತ್ಯದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಔರಾದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಅಭಿಪ್ರಾಯಪಟ್ಟರು.
ಪಟ್ಟಣದ ಛತ್ರಪತಿ ಶಿವಾಜಿ ಮಹಾ ವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶರಣರ ವಚನಗಳು ವೇದಿಕೆಗಳ ಮೇಲೆ ಉದ್ದುದ್ದ ಮಾಡುವ ಭಾಷಣಕ್ಕೆ ಭೂಷಣವಾಗಬಾರದು. ಬದಲಿಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ವಲಯಾಧ್ಯಕ್ಷ ಜಗನ್ನಾಥ ಮೂಲಗೆ ಮಾತನಾಡಿ, ಸಧೃಢ ಸಮಾಜ ನಿರ್ಮಾಣವಾಗಲು ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಎಲ್ಲ ಜಾತಿ ಜನಾಂಗಗಳ ಸ್ತ್ರೀ, ಪುರುಷರು ಜೀವನದಲ್ಲಿ ಅನುಭವಿಸಿದ ಸತ್ಯೋದಯದ ಸೂತ್ರಗಳನ್ನು ಅನುಭವಿಸಿ ಬರೆದ ವಚನಗಳು ವೈಜ್ಞಾನಿಕ ಚಿಂತನೆಗಳಿಂದ ಕೂಡಿವೆ ಎಂದರು.
ಪ್ರಾಚಾರ್ಯ ಶಾಮರಾವ ಕಾದೇಪೂರೆ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾ ಅಧ್ಯಕ್ಷ ಶಂಭೂಲಿಂಗ ಕಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಚಂದ್ರಕಾಂತ ಬಿರಾದಾರ, ಉಪನ್ಯಾಸಕ ಅಶೋಕ ಮೈನಳ್ಳೆ, ವೀರಣ್ಣ ಕುಂಬಾರ, ಶೈಲಜಾ ನಾರಾ, ಸರೋಜಾ ಬನವಾ, ರತ್ನದೀಪ ಸೇರಿಕಾರ ಮುಂತಾದವರು ಇದ್ದರು. ಎಸ್.ಎಂ. ಪಾಟೀಲ ಸ್ವಾಗತಿಸಿದರು. ಬಾಲಾಜಿ ತಾಡಮಲ್ಲೆ ನಿರ್ವಹಿಸಿದರು. ಅಶೋಕ ಭಂಡಾರಿ ವಂದಿಸಿದರು.