‘ಸರ್ಕಾರಿ ಶಾಲೆಗಳಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದರಿಂದ ದಾಖಲಾತಿ 25 ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಒಂದೇ ಸ್ಥಳದಲ್ಲಿ ಸೇರಿಸಿ ದೊಡ್ಡ ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದನ್ನು ಮಾದರಿ ಶಾಲೆ ಎಂದು ಕರೆದಿದೆ.ಸರ್ಕಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 35 ಸಾವಿರ ಶಿಕ್ಷಕರ ಕೊರತೆ ಇದೆ. 4767ರಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲದ ಶಾಲೆಗಳಿವೆ. ಅಂತಹ 16 ಶಾಲೆಗಳು ಚಾಮರಾಜನಗರ ಹಾಗೂ 30 ಶಾಲೆಗಳು ರಾಯಚೂರಿನಲ್ಲಿ ಇವೆ. ಒಂದು ಶಾಲೆಗೆ ಇಡೀ ವರ್ಷಕ್ಕೆ ಐದು ಮಕ್ಕಳು ದಾಖಲಾಗುತ್ತಿರುವುದು, 10 ಮಕ್ಕಳು ದಾಖಲಾಗುತ್ತಿರುವ ನಿದರ್ಶನಗಳೂ ಇವೆ. ಇದಕ್ಕಿಂತಲೂ ಕರಿಣ ಪರಿಸ್ಥಿತಿಯಲ್ಲಿ ಇನ್ನೂ ಶಾಲೆಗಳು ಇರಬಹುದು. ಈ ಕೊರತೆಗಳನ್ನು ಸರಿಪಡಿಸಲು, ಶಾಲೆಗಳ ಗುಣಮಟ್ಟ ಏರಿಸಲು ಸರ್ಕಾರ ಏಕೆ ಕ್ರಮ ವಹಿಸುವುದಿಲ್ಲ? ಶಾಲೆಗಳ ವಿಲೀನ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.