ಚಾಮರಾಜನಗರ: ತಾಲ್ಲೂಕಿನ ದಡದಹಳ್ಳಿ ರಮೇಶ್ ಸಾವಿನ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಬಿಜೆಪಿ ಮುಖಂಡ ಡಾ.ಎನ್.ಎಸ್.ಮೋಹನ್ ಗುರುವಾರ ಆಗ್ರಹಿಸಿದರು.
ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿರುವ ರಮೇಶ್ ಮನೆಗೆ ಭೇಟಿ ನೀಡಿ, ಅವರ ಪತ್ನಿ ಪ್ರತಿಮ ಹಾಗು ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ ಪರಿಹಾರವನ್ನೂ ನೀಡಿದರು.
‘ರಮೇಶ್ ಆ. 30ರಂದು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಂಬಿಸಲಾಗಿದೆ. ಠಾಣೆಯಲ್ಲಿಯೂ ಅದೇ ರೀತಿ ಪ್ರಕರಣ ದಾಖಲಾಗಿದೆ. ಆದರೆ, ವಿಡಿಯೊಗಳನ್ನು ನೋಡಿದರೆ, ಇದು ಅಪಘಾತವಲ್ಲ; ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಮೂಡುತ್ತದೆ. ಇದೊಂದು ಅಮಾನವೀಯ ಘಟನೆ. ಪೊಲೀಸರು ಎಲ್ಲ ಅಯಾಮಗಳಲ್ಲಿ ತನಿಖೆ ನಡೆಸಬೇಕು. ನಾನು ವೈದ್ಯನಾಗಿ ಹಾಗೂ ಬೆಂಗಳೂರಿನ ಡಾ. ಸಂಜಯ್ಗಾಂಧಿ ಅಸ್ಪತ್ರೆಯಲ್ಲಿ ಅಪಘಾತ ವಿಭಾಗದಲ್ಲಿ ಮುಖ್ಯಸ್ಥನಾಗಿ ಅನೇಕ ಪ್ರಕರಣಗಳನ್ನು ನೋಡಿದ್ದೇನೆ. ಇದು ಅಪಘಾತದಂತೆ ಕಾಣುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯ ಮಾಡಿದಂತೆ ಕಾಣುತ್ತಿದೆ’ ಎಂದರು.
‘ಪೊಲೀಸ್ ಠಾಣೆಗೆ ತೆರಳಿ ಮತ್ತೊಂದು ದೂರು ನೀಡಿ. ಇದು ಅಪಘಾತವಲ್ಲ. ಕೊಲೆ ಎಂದು ದೂರು ನೀಡಿ, ತನಿಖೆಯಿಂದ ಸತ್ಯ ಹೊರಬರಲಿ’ ಎಂದು ರಮೇಶ್ ಪತ್ನಿ ಪ್ರತಿಮಾಗೆ ಸಲಹೆ ನೀಡಿದರು.
ದಡದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೂರ್ತಿ, ಶಂಕರ್, ಶಿವಣ್ಣ, ಮುಖಂಡರಾದ ಗೋವಿಂದರಾಜು, ಡಾ. ಮೋಹನ್ ಅಭಿಮಾನಿ ಬಳಗದ ಅಧ್ಯಕ್ಷ ಕುರುಬರಹುಂಡಿ ಕೆ.ಆರ್. ಲೋಕೇಶ್, ಬಳಗದ ಹಿರಿಬೇಗೂರು ಸೋಮಶೇಖರ್, ಕಾಡಹಳ್ಳಿ ಕುಮಾರ್, ಪಣ್ಯದಹುಂಡಿ ರಾಜು, ಕೆರೆಹಳ್ಳಿ ವೆಂಕಟೇಶ್, ಮೈಸೂರು ಕುಮಾರ್, ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.