ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆಜಿಲ್ಲೆಯಲ್ಲಿ ಎರಡು ದಿನಗಳ ಅವಧಿಯಲ್ಲಿ 120 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. 61 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ.
ಯುಗಾದಿಯ ದಿನವಾದ ಮಂಗಳವಾರ 48 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದರೆ, 11 ಮಂದಿ ಗುಣಮುಖರಾಗಿದ್ದಾರೆ. ಬುಧವಾರ 72 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. 50 ಜನ ಸೋಂಕು ಮುಕ್ತರಾಗಿದ್ದಾರೆ.
ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 321ಕ್ಕೆ ಏರಿದೆ. ಈ ಪೈಕಿ 208 ಸೋಂಕಿತರು ಹೋಂ ಐಸೊಲೇಷನ್ನಲ್ಲಿದ್ದಾರೆ. ಉಳಿದವರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಐವರು ಐಸಿಯುನಲ್ಲಿದ್ದಾರೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 7,522ಕ್ಕೆ ಏರಿದೆ. 7,066 ಮಂದಿ ಗುಣಮುಖರಾಗಿದ್ದಾರೆ. 115 ಮಂದಿ ಸೋಂಕಿನಿಂದ ಹಾಗೂ 20 ಮಂದಿ ಇತರೆ ಕಾರಣಗಳಿಂದ ನಿಧನರಾಗಿದ್ದಾರೆ.
ಬುಧವಾರ 1,325 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,253 ಮಂದಿಯ ವರದಿ ನೆಗಟಿವ್ ಬಂದಿವೆ.
ಚಾಮರಾಜನಗರದಲ್ಲಿ ಹೆಚ್ಚು:ಸೋಂಕು ದೃಢಪಟ್ಟ 72 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 38 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆಯಲ್ಲಿ 16 ಮಂದಿ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ತಲಾ ಆರು, ಹನೂರಿನಲ್ಲಿ ಐವರು ಮತ್ತು ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಾಸಕರಿಗೆ ಮನೆಯಲ್ಲೇ ಚಿಕಿತ್ಸೆ
ಕೋವಿಡ್ಗೆ ತುತ್ತಾಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದಲ್ಲಿರುವ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಅವರು, ಮೂರು ದಿನಗಳ ಹಿಂದೆಯಷ್ಟೇ ಕ್ಷೇತ್ರಕ್ಕೆ ವಾಪಸ್ ಆಗಿದ್ದರು.
ನಂತರ ಅವರಲ್ಲಿ ಮೈ ಕೈನೋವು, ನೆಗಡಿ ಕಾಣಿಸಿಕೊಂಡಿತ್ತು. ಸಂಶಯ ಬಂದು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು. ಬುಧವಾರ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಾಸಕರ ಆರೋಗ್ಯ ಸ್ಥಿರವಾಗಿದೆ. ನೆಗಡಿ ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.