ಕೊಳ್ಳೇಗಾಲ: ಚಂದ್ರಯಾನ–3 ಯಶಸ್ವಿಯಾಗಿದ್ದರಿಂದ ಇಲ್ಲಿನ ಶ್ರೀ ವಾಸವಿ ವಿದ್ಯಾ ಕೇಂದ್ರದ ಶಾಲಾ ಮಕ್ಕಳು ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.
ನಗರದ ವಾಸವಿ ವಿದ್ಯಾ ಕೇಂದ್ರದ ಶಾಲೆಯಲ್ಲಿ ಆರಂಭವಾದ ಜಾಗೃತಿ ಜಾಥಾಕ್ಕೆ ಮುಖ್ಯ ಶಿಕ್ಷಕಿ ಗೀತಾ ಚಾಲನೆ ನೀಡಿದರು. ನಂತರ ಅಲ್ಲಿಂದ ಹೊರಟ ಜಾಥಾ ನಗರದ ಎಂ.ಜಿ.ಎಸ್.ವಿ ಮುಖ್ಯರಸ್ತೆ, ಡಾ. ವಿಷ್ಣುವರ್ಧನ್ ರಸ್ತೆ, ಡಾ. ರಾಜ್ಕುಮಾರ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ಹಾಗೂ ಐ.ಬಿ ರಸ್ತೆಯಲ್ಲಿ ಸಾಗಿತು. ದಾರಿ ಉದ್ದಕ್ಕೂ ಜೈ ಹಿಂದ್, ಜೈ ಭಾರತ್ ಎಂಬ ಘೋಷಣೆ ಕೂಗಿದರು.
ನಂತರ ಮುಖ್ಯ ಶಿಕ್ಷಕಿ ಗೀತಾ ಮಾತನಾಡಿ, ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ‘ವಿಕ್ರಮ್ ಲ್ಯಾಂಡರ್’ ಸ್ಪರ್ಶಿಸಿತು. ಇದಕ್ಕೆ ಕಾರಣದ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಲು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮತ್ತು ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುವುದರ ಮೂಲಕ ಇನ್ನಷ್ಟು ದೇಶ ಎತ್ತರಕ್ಕೆ ಬೆಳೆಯಬೇಕು ಎಂದರು.
ಜಾಥಾದಲ್ಲಿ ಶಾಲಾ ಮಕ್ಕಳು, ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.