ಚಾಮರಾಜನಗರ: ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಿ, ಜೀವ ಹಾನಿ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಸಮನ್ವಯ ಸಾಧಿಸಲು ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಸಮ್ಮತಿಸಿವೆ.
ಬಂಡೀಪುರದಲ್ಲಿ ಭಾನುವಾರ ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಸಮ್ಮುಖದಲ್ಲಿ ನಡೆದ ಅಂತರರಾಜ್ಯ ಅರಣ್ಯ ಸಚಿವರ ಸಮನ್ವಯ ಸಮಿತಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಮಾನವ ವನ್ಯಜೀವಿ ಸಂಘರ್ಷ ತಡೆ ಮತ್ತು ಜೀವ ಹಾನಿ ತಪ್ಪಿಸಲು ಪಾಲಿಸಬೇಕಾದ ನಿಯಮಗಳನ್ನು ಒಳಗೊಂಡ ಪತ್ರಕ್ಕೆ (ಸನ್ನದು– ಚಾರ್ಟರ್) ಉಭಯ ಸಚಿವರು ಸಹಿ ಹಾಕಿದರು. ಮೂರೂ ರಾಜ್ಯಗಳ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆಗಳಿಂದಾಗಿ ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಆಗುತ್ತಿದೆ. ಇದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ನಗರೀಕರಣದ ಕಾರಣಕ್ಕೆ ವನ್ಯಜೀವಿ– ಮಾನವ ಸಂಘರ್ಷವೂ ಜಾಸ್ತಿಯಾಗಿದೆ. ಈ ವರ್ಷ ರಾಜ್ಯದಲ್ಲಿ ಪ್ರಾಣಿಗಳ ದಾಳಿಯಿಂದಾಗಿ 52 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಾರ ಬೆಳೆ ಹಾನಿಯೂ ಆಗಿದೆ. ವನ್ಯಜೀವಿ, ಅರಣ್ಯ ಸಂರಕ್ಷಣೆಯ ಜೊತೆಗೆ, ಪ್ರಾಣ ಹಾನಿ ತಡೆಯುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಈ ಸಭೆ ನಡೆಸಲಾಯಿತು’ ಎಂದು ತಿಳಿಸಿದರು.
‘ಸಮನ್ವಯ ಸಾಧನೆ, ಎಐ (ಕೃತಕ ಬುದ್ಧಿಮತ್ತೆ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ, ಡ್ರೋನ್ ಕ್ಯಾಮೆರಾಗಳ ಬಳಕೆ, ಮಾಹಿತಿ ವಿನಿಮಯ, ಕಾರ್ಯಾಚರಣೆಗಳಲ್ಲಿ ಸಹಕಾರ, ಸಂಘರ್ಷ ತಡೆಗೆ ಮಾದರಿ ಪ್ರಯೋಗ ಅಳವಡಿಕೆ, ಅಧಿಕಾರಿಗಳ ನಡುವೆ ನಿರಂತರ ಸಂಪರ್ಕ ಸೇರಿದಂತೆ ಹಲವು ನಿಯಮಗಳ ಪಾಲನೆಗೆ ತೀರ್ಮಾನಿಸಲಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.