ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ವನ್ಯಜೀವಿ ಸಂಘರ್ಷ ತಡೆ: ತಂತ್ರಜ್ಞಾನ ವಿನಿಮಯ, ಸಹಕಾರ, ಸಮನ್ವಯಕ್ಕೆ ತೀರ್ಮಾನ

Published 11 ಮಾರ್ಚ್ 2024, 0:21 IST
Last Updated 11 ಮಾರ್ಚ್ 2024, 0:21 IST
ಅಕ್ಷರ ಗಾತ್ರ

ಚಾಮರಾಜನಗರ: ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಿ, ಜೀವ‌ ಹಾನಿ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಸಮನ್ವಯ ಸಾಧಿಸಲು ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಸಮ್ಮತಿಸಿವೆ. 

ಬಂಡೀಪುರದಲ್ಲಿ ಭಾನುವಾರ ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ ಸಮ್ಮುಖದಲ್ಲಿ ನಡೆದ ಅಂತರರಾಜ್ಯ ಅರಣ್ಯ ಸಚಿವರ ಸಮನ್ವಯ ಸಮಿತಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. 

ಮಾನವ ವನ್ಯಜೀವಿ ಸಂಘರ್ಷ ತಡೆ ಮತ್ತು ಜೀವ ಹಾನಿ ತಪ್ಪಿಸಲು ಪಾಲಿಸಬೇಕಾದ ನಿಯಮಗಳನ್ನು ಒಳಗೊಂಡ ಪತ್ರಕ್ಕೆ (ಸನ್ನದು– ಚಾರ್ಟರ್‌) ಉಭಯ ಸಚಿವರು ಸಹಿ ಹಾಕಿದರು. ಮೂರೂ ರಾಜ್ಯಗಳ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. 

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆಗಳಿಂದಾಗಿ ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಆಗುತ್ತಿದೆ. ಇದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ನಗರೀಕರಣದ ಕಾರಣಕ್ಕೆ ವನ್ಯಜೀವಿ– ಮಾನವ ಸಂಘರ್ಷವೂ ಜಾಸ್ತಿಯಾಗಿದೆ. ಈ ವರ್ಷ ರಾಜ್ಯದಲ್ಲಿ ಪ್ರಾಣಿಗಳ ದಾಳಿಯಿಂದಾಗಿ 52 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಾರ ಬೆಳೆ ಹಾನಿಯೂ ಆಗಿದೆ. ವನ್ಯಜೀವಿ, ಅರಣ್ಯ ಸಂರಕ್ಷಣೆಯ ಜೊತೆಗೆ, ಪ್ರಾಣ ಹಾನಿ ತಡೆಯುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಈ ಸಭೆ ನಡೆಸಲಾಯಿತು’ ಎಂದು ತಿಳಿಸಿದರು.

‘ಸಮನ್ವಯ ಸಾಧನೆ, ಎಐ (ಕೃತಕ ಬುದ್ಧಿಮತ್ತೆ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ, ಡ್ರೋನ್‌ ಕ್ಯಾಮೆರಾಗಳ ಬಳಕೆ, ಮಾಹಿತಿ ವಿನಿಮಯ, ಕಾರ್ಯಾಚರಣೆಗಳಲ್ಲಿ ಸಹಕಾರ, ಸಂಘರ್ಷ ತಡೆಗೆ ಮಾದರಿ ಪ್ರಯೋಗ ಅಳವಡಿಕೆ, ಅಧಿಕಾರಿಗಳ ನಡುವೆ ನಿರಂತರ ಸಂಪರ್ಕ ಸೇರಿದಂತೆ ಹಲವು ನಿಯಮಗಳ ಪಾಲನೆಗೆ ತೀರ್ಮಾನಿಸಲಾಯಿತು’ ಎಂದರು. 

ಬಂಡೀಪುರದಲ್ಲಿ ಭಾನುವಾರ ನಡೆದ ಅಂತರರಾಜ್ಯ ಅರಣ್ಯ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ ಮತ್ತು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪಾಲಿಸಬೇಕಾದ ನಿಯಮಗಳನ್ನೊಳಗೊಂಡ ಪತ್ರವನ್ನು (ಸನ್ನದು) ಪ್ರದರ್ಶಿಸಿದರು. ರಾಜ್ಯ ಅರಣ್ಯ ಇಲಾಖೆಯ ಆನೆ ಯೋಜನೆಯ ಎಪಿಸಿಇಎಫ್‌ ಮನೋಜ್‌ ಆರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್‌ ಪಿಸಿಸಿಎಫ್‌ ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ ಸುಭಾಷ್‌ ಕೆ.ಮಾಲ್ಖೆಡೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಭಾಗವಹಿಸಿದ್ದರು
ಬಂಡೀಪುರದಲ್ಲಿ ಭಾನುವಾರ ನಡೆದ ಅಂತರರಾಜ್ಯ ಅರಣ್ಯ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ ಮತ್ತು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪಾಲಿಸಬೇಕಾದ ನಿಯಮಗಳನ್ನೊಳಗೊಂಡ ಪತ್ರವನ್ನು (ಸನ್ನದು) ಪ್ರದರ್ಶಿಸಿದರು. ರಾಜ್ಯ ಅರಣ್ಯ ಇಲಾಖೆಯ ಆನೆ ಯೋಜನೆಯ ಎಪಿಸಿಇಎಫ್‌ ಮನೋಜ್‌ ಆರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್‌ ಪಿಸಿಸಿಎಫ್‌ ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ ಸುಭಾಷ್‌ ಕೆ.ಮಾಲ್ಖೆಡೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಭಾಗವಹಿಸಿದ್ದರು
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭಾನುವಾರ ಬಂಡೀಪುರದಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಮೈಸೂರು ಸಿಸಿಎಫ್‌ ಮಾಲತಿ ಪ್ರಿಯಾ ಆನೆ ಯೋಜನೆ ಪಿಸಿಸಿಎಫ್‌ ಮನೋಜ್‌ ಇತರರು ಪಾಲ್ಗೊಂಡಿದ್ದರು
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭಾನುವಾರ ಬಂಡೀಪುರದಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಮೈಸೂರು ಸಿಸಿಎಫ್‌ ಮಾಲತಿ ಪ್ರಿಯಾ ಆನೆ ಯೋಜನೆ ಪಿಸಿಸಿಎಫ್‌ ಮನೋಜ್‌ ಇತರರು ಪಾಲ್ಗೊಂಡಿದ್ದರು
ಸಹಕಾರ ನೀಡದ ಕೇಂದ್ರ: ಆರೋಪ
‘ಅರಣ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರಗಳಂತೆ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಸಹಕಾರ ನೀಡಬೇಕು. ಕೇಂದ್ರದ ಪರಿಹಾರಾತ್ಮಕ ನಿಧಿಯಲ್ಲಿ (ಕಾಂಪಾ) ಸಾಕಷ್ಟು ಹಣ ಇದೆ. ಆದರೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ದೂರಿದರು.  ‘ಸಂಘರ್ಷ ತಡೆಗೆ ರೈಲ್ವೆ ಕಂಬಿ ಬೇಲಿ ನಿರ್ಮಾಣಕ್ಕೆ ‘ಕಾಂಪಾ’ ಅಡಿ ₹50 ಕೋಟಿ ನೀಡುವಂತೆ ನಾವು ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ತಿರಸ್ಕರಿಸಿದೆ. ಹಳೆಯ ರೈಲ್ವೆ ಕಂಬಿಗಳನ್ನು ಶೇ 50ರ ಕಡಿಮೆ ಬೆಲೆಗೆ ನೀಡುವಂತೆ ಕೋರಿದ್ದೇವೆ ಅದಕ್ಕೂ ಸ್ಪಂದಿಸಿಲ್ಲ’ ಎಂದು ತಿಳಿಸಿದರು.
‘ಪರಿಹಾರ ಸ್ವೀಕರಿಸದ ಕೇರಳದ ಕುಟುಂಬ’
‘ರಾಜ್ಯದಲ್ಲಿ ಸೆರೆ ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದ ಮಖ್ನಾ ಆನೆ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆಸಿದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ₹15 ಲಕ್ಷ ಪರಿಹಾರವನ್ನು ಕುಟುಂಬ ತಿರಸ್ಕರಿಸಿದೆ’ ಎಂದು ಸಚಿವ ಖಂಡ್ರೆ ಹೇಳಿದರು. ‘ಮಾನವೀಯ ಆಧಾರದಲ್ಲಿ ನಾವು ಪರಿಹಾರ ನೀಡಲು ನಿರ್ಧರಿಸಿದ್ದೆವು. ಆದರೆ ಬಿಜೆಪಿ ಅದನ್ನು ರಾಜಕೀಯಕರಣಗೊಳಿಸಿತು. ಈ ಕಾರಣಕ್ಕೆ ಕುಟುಂಬವು ಪರಿಹಾರ ಬೇಡ ಎಂದಿದ್ದು ನಾವು ನೀಡಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಕಾಯ್ದೆ ತಿದ್ದುಪಡಿಗೆ ‍ಪ್ರಸ್ತಾವ
‘ಆನೆ ಸೇರಿದಂತೆ ವನ್ಯಪ್ರಾಣಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವುಗಳ ನಿಯಂತ್ರಣಕ್ಕಾಗಿ ವಿವಿಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಸದ್ಯ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗಷ್ಟೇ ಇದೆ. ಈ ಅಧಿಕಾರವನ್ನು ಕೆಳಹಂತದ ಅಧಿಕಾರಿಗಳಿಗೆ ನೀಡಬೇಕು. ಇದಕ್ಕಾಗಿ ಅರಣ್ಯ ಸಂರಕ್ಷಣೆ ಕಾಯ್ದೆಯ ಸೆಕ್ಷನ್‌ 11(1ಎ) ಮತ್ತು 11 (1ಬಿ)ಗಳಿಗೆ ತಿದ್ದುಪಡಿ ತರಬೇಕು ಎಂಬ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎನ್ನುವ ಸಲಹೆಯನ್ನು ಕೇರಳದ ಅರಣ್ಯ ಸಚಿವ ಶಶೀಂದ್ರನ್‌ ನೀಡಿದ್ದಾರೆ. ಮೂರು ರಾಜ್ಯಗಳೂ ಒಟ್ಟಾಗಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಖಂಡ್ರೆ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT