ಚಾಮರಾಜನಗರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀದರನ್ ಅವರು ಜಿಲ್ಲೆಯಲ್ಲಿ ಬೃಹತ್ ಉದ್ಯಮವೊಂದನ್ನು ಸ್ಥಾಪಿಸುತ್ತಿದ್ದಾರೆ. ₹400 ಕೋಟಿ ಬಂಡವಾಳ ಹೂಡುತ್ತಿದ್ದಾರೆ.
ತಾಲ್ಲೂಕಿನ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದ 46 ಎಕರೆ ಪ್ರದೇಶದಲ್ಲಿ ಪಾನೀಯ ತಯಾರಿಕಾ ಘಟಕವನ್ನು ಆರಂಭಿಸುತ್ತಿದ್ದಾರೆ. ಇದರಿಂದಾಗಿ 800 ಮಂದಿಗೆ ಉದ್ಯೋಗ ಸಿಗಲಿದೆ.
ಆರು ತಿಂಗಳ ಹಿಂದೆಯೇ ಅವರು ಜಮೀನು ಖರೀದಿಸಿದ್ದು, ರಾಜ್ಯಮಟ್ಟದಲ್ಲೇ ಯೋಜನೆಗೆ ಅನುಮತಿ ಸಿಕ್ಕಿದೆ. ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ವರ್ಷದೊಳಗೆ ಕಾರ್ಖಾನೆ ಆರಂಭವಾಗುವ ಸಾಧ್ಯತೆ ಇದೆ.
ಎಂ/ಎಸ್ ಮುತ್ತಯ್ಯ ಬೆವರೇಜ್ ಅಂಡ್ ಕನ್ಫೆಕ್ಷನರಿ ಪ್ರೈ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದು, ಇದು ತಂಪು ಪಾನೀಯ ಘಟಕ ಎಂದು ಕೈಗಾರಿಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.