ಚಾಮರಾಜನಗರ: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ.
ವಾರದಿಂದೀಚೆಗೆ ತಾಲ್ಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಗುಡಿಸಲುಗಳಿಗೆ ಹಾನಿ ಸಂಭವಿಸಿದೆ.
ಶನಿವಾರ ರಾತ್ರಿ ತಾಲ್ಲೂಕಿನ ಹೊಂಡರಬಾಳು, ನಲ್ಲೂರು, ಹರದನಹಳ್ಳಿ, ವೆಂಕಟಯ್ಯನ ಛತ್ರ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಬೆಳೆದಿರುವ ಬೆಳೆ ನಷ್ಟವಾಗಿದೆ. ಬಾಳೆ, ತೆಂಗಿನ ಮರಗಳು ಧರೆಗುಳಿದಿವೆ. ಕಬ್ಬಿನ ಬೆಳೆ ನೆಲಕ್ಕೆ ಬಾಗಿದೆ.
ಹೊಂಡರಬಾಳು, ನಲ್ಲೂರು ಭಾಗದಲ್ಲಿ ನಾಲ್ವರು ರೈತರ ಎಂಟು ಎಕರೆಗೂ ಹೆಚ್ಚು ಜಾಗದಲ್ಲಿ ಬೆಳೆದಿದ್ದ ಬಾಳೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬಾಳೆ ಚೆನ್ನಾಗಿ ಬಂದಿತ್ತು. ಶನಿವಾರ ರಾತ್ರಿ ಬೀಸಿದ ಗಾಳಿಗೆ ನೆಲಕಚ್ಚಿವೆ ಎಂದು ರೈತರು ಮಾಹಿತಿ ನೀಡಿದರು.
ತಾಲ್ಲೂಕಿನ ಬೇವಿನತಾಳಪುರ, ಬಂದೀಗೌಡನಹಳ್ಳಿ, ಹರದನಹಳ್ಳಿ, ವೆಂಕಟಯ್ಯನಛತ್ರ, ತಾವರಕಟ್ಟೆಮೋಳೆಗಳಲ್ಲೂ ಬೆಳೆ ಹಾನಿ ಸಂಭವಿಸಿದೆ. ತೆಂಗು, ಹೆಬ್ಬೇವು ಸೇರಿದಂತೆ ಹಲವು ಮರಗಳು ನೆಲಕ್ಕುರುಳಿವೆ.
ಬೇವಿನತಾಳಪುರದ ರೈತ ಚನ್ನಂಜಶೆಟ್ಟಿ ಅವರಿಗೆ ಸೇರಿದ ಗುಡಿಸಲು ಹಾಗೂ ಶೀಟು ಮನೆ ಕುಸಿದಿದ್ದು, ಕುರಿಯೊಂದು ಮೃತಪಟ್ಟಿದೆ. ಅದೇ ಗ್ರಾಮದ ಗುರುಸ್ವಾಮಿ ಎಂಬುವವರು ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ನೆಲಕ್ಕೆ ಬಾಗಿದೆ.
ತಾಲ್ಲೂಕು ಆಡಳಿತವು ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಯಳಂದೂರು ವರದಿ: ಯಳಂದೂರು ತಾಲ್ಲೂಕಿನಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ನಿವಾಸಿ ಮಾದಯ್ಯ ಅವರ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ.