ಚಾಮರಾಜನಗರ: ರಾಜ್ಯ ಸಹಕಾರ ಮಹಾಮಂಡಲ, ಚಾಮುಲ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ಮಂಗಳವಾರದಿಂದ (ನ.14) 20ರವರೆಗೆ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ನಡೆಯಲಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಸಪ್ತಾಹದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ‘ಜಿಲ್ಲೆಯ ಐದೂ ತಾಲ್ಲೂಕು ಕೇಂದ್ರಗಳು ಹಾಗೂ ಎರಡು ಹೋಬಳಿ ಕೇಂದ್ರಗಳಲ್ಲಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
‘ಸಹಕಾರ ಸಂಘದ ಏಳು ತತ್ವ ಹೊಂದಿರುವ ಏಳು ಬಣ್ಣಗಳ ಧ್ವಜವನ್ನು ಮಂಗಳವಾರದಿಂದ 20ರವರಗೆ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಕಟ್ಟಡದ ಮೇಲೆ ಆಯಾ ಸಹಕಾರಸಂಘದ ಆಡಳಿತಮಂಡಳಿಯವರು ಕಡ್ಡಾಯವಾಗಿ ಹಾರಿಸಬೇಕು’ ಎಂದು ಮನವಿ ಮಾಡಿದರು.
‘1952ರಲ್ಲಿ ಅಂತಾರಾಷ್ಟ್ರಿಯ ಸಹಕಾರ ಮೈತ್ರಿ ಸಂಸ್ಥೆ ಕೈಗೊಂಡ ನಿರ್ಣಯವು 1953ರಿಂದ ಜಾರಿಗೆ ಬಂದಿದ್ದು, ಇದರ ಅಂಗಸಂಸ್ಥೆಯಾಗಿ ಭಾರತ ರಾಷ್ಟ್ರಿಯ ಸಹಕಾರ ಯೂನಿಯನ್ ದೇಶದಾದ್ಯಂತ ಸಪ್ತಾಹ ಆಚರಣೆ ವ್ಯವಸ್ಥೆ ಮಾಡಿದೆ. ಪ್ರತಿವರ್ಷ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನಿಟ್ಟುಕೊಂಡು 70 ವರ್ಷಗಳಿಂದ ಅಖಿಲಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ’ ಎಂದರು.
ವಿವಿಧೆಡೆ ಕಾರ್ಯಕ್ರಮಗಳು: ಮಂಗಳವಾರ ಬೆಳಿಗ್ಗೆ 10.30ಕ್ಕೆ ನಗರದ ರಾಮಸಮುದ್ರದ ಡಾ.ರಾಜ್ಕುಮಾರ್ ಕ್ಷೀರಭವನದ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ನ.15 ರಂದು ಹನೂರು ಚಾಮುಲ್ ಉಪಕಚೇರಿ, 16ರಂದು ಗುಂಡ್ಲುಪೇಟೆಯ ಲ್ಯಾಂಪ್ಸ್ ಸಹಕಾರಸಂಘ, 17ರಂದು ಸಂತೇಮರಹಳ್ಳಿ ಪಿಎಸಿಸಿ ಕಚೇರಿ ಸಭಾಂಗಣ, 18 ರಂದು ಕೊಳ್ಳೇಗಾಲದ ಸರ್ಕಾರಿ ನೌಕರರ ಸಂಘದ ಕಚೇರಿ ಸಭಾಂಗಣ, 19ರಂದು ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಪಿಎಸಿಸಿ ಕಚೇರಿ ಸಭಾಂಗಣ, 20ರಂದು ಯಳಂದೂರಿನ ಬಳೇಮಂಟಪದ ಎದುರಿನ ಶಂಕರ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ನಂಜುಂಡ ಪ್ರಸಾದ್ ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎಂ.ಬಸವಣ್ಣ, ಮಹದೇವಪ್ರಭು, ನಾಗಸುಂದರ, ಪ್ರಭುಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಯೋಗೇಂದ್ರನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.