ಚಾಮರಾಜನಗರ: ಭೂಪರಿವರ್ತನೆಗಾಗಿ ನಿರಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ನೀಡಲು ₹3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುಟ್ಟಸ್ವಾಮಿ ಅವರು ಎಸಿಬಿ ಬಲೆಗೆ ಬಿದ್ದವರು.
ಹರದನಹಳ್ಳಿಯ ಆರ್.ಲಿಂಗರಾಜು ಅವರು ಭೂಪರಿವರ್ತನೆಗಾಗಿ ನಿರಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಪುಟ್ಟಸ್ವಾಮಿ ಅವರು ಎನ್ಒಸಿ ನೀಡಲು ₹3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ₹500 ಪಡೆದಿದ್ದರು. ಉಳಿದ ₹2,500 ಅನ್ನು ಬುಧವಾರ ನೀಡುವಂತೆ ಹೇಳಿದ್ದರು. ಲಿಂಗರಾಜು ಅವರು ನಗರದ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಬಲೆಗೆ: ದೂರುದಾರ ಬುಧವಾರ ಸಂಜೆ ಬಿಆರ್ಟಿ ಕಚೇರಿಗೆ ದುಡ್ಡು ತೆಗೆದುಕೊಂಡು ಹೋಗಿದ್ದರು. ಎಸಿಬಿ ಅಧಿಕಾರಿಗಳು ಕೂಡ ಅಲ್ಲೇ ಕಾದಿದ್ದರು.
‘ಪುಟ್ಟಸ್ವಾಮಿ ಅವರು ಅಲ್ಲಿ ದುಡ್ಡು ಪಡೆಯದೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುವಂತೆ, ಅಲ್ಲೇ ಹಣಕೊಡುವಂತೆ ದೂರುದಾರರಿಗೆ ಸೂಚಿಸಿದರು. ₹2,500 ಪಡೆಯುತ್ತಿದ್ದ ಸಂದರ್ಭದಲ್ಲಿ ನಮ್ಮ ಕೈಗೆ ಸಿಕ್ಕಿಬಿದ್ದರು’ ಎಂದು ಎಸಿಬಿ ಡಿವೈಎಸ್ಪಿ ಸದಾನಂದ ಎ.ಟಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪುಟ್ಟಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.