ಚಾಮರಾಜನಗರ: ಜಿಲ್ಲೆಯಾದ್ಯಂತ ಚಂಪಾ ಷಷ್ಠಿಯನ್ನು ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಹಲವು ಕಡೆಗಳಲ್ಲಿ ಜನರು ಹುತ್ತಗಳಿಗೆ ಕೋಳಿ ಬಲಿ ಕೊಟ್ಟು ಅದರ ರಕ್ತವನ್ನು ನೈವೇದ್ಯವಾಗಿ ಅರ್ಪಿಸಿದರು.
'ತನಿ ಹಬ್ಬ' ಎಂಬ ಹೆಸರಿನಲ್ಲಿ ಈ ಆಚರಣೆಯನ್ನು ಮಾಡಲಾಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲೂ ಈ ಆಚರಣೆ ಚಾಲ್ತಿಯಲ್ಲಿದೆ.
ಷಷ್ಠಿ ದಿನ ಕೋಳಿ ಬಲಿ ನೀಡಿದರೆ, ಹಾವುಗಳ ಉಪಟಳ ಇರುವುದಿಲ್ಲ. ನಾಗದೋಷವೂ ಕಂಡು ಬರುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.
ಜನರು ಕುಟುಂಬ ಸಮೇತರಾಗಿ ಹುತ್ತದ ಬಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಕೋಳಿ ಬಲಿ ನೀಡುತ್ತಾರೆ.
ವಿಶೇಷ ಪೂಜೆ: ಹಬ್ಬದ ಅಂಗವಾಗಿ ಭಕ್ತರು ಹುತ್ತಗಳಿಗೆ, ನಾಗನ ಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಹಿಳೆಯರು, ಬೆಳಿಗ್ಗೆಯಿಂದಲೇ ಉಪವಾಸ ಇದ್ದು, ಕುಟುಂಬದ ಸದಸ್ಯರೊಂದಿಗೆ ಹುತ್ತ ಇರುವ ಕಡೆ ತೆರಳಿ ಪೂಜೆ ಸಲ್ಲಿಸಿದರು. ನಾಗನ ಸಾನಿಧ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.