ಚಾಮರಾಜನಗರ: ಶ್ರಾವಣ ಮಾಸ ಆರಂಭವಾಗಿ ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹಬ್ಬದ ಸಮಯದಲ್ಲಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ಆಷಾಢ ಮಾಸದಲ್ಲಿ ಹೂವುಗಳಿಗೆ ಬೇಡಿಕೆ ಕಡಿಮೆ ಇತ್ತು. ಮಳೆಯೂ ಬರುತ್ತಿದ್ದರಿಂದ ಗುಣಮಟ್ಟದ ಹೂವು ಲಭ್ಯವಿರಲಿಲ್ಲ. ಹೀಗಾಗಿ ಬೆಲೆಯೂ ಇರಲಿಲ್ಲ. ಕಳೆದ ವಾರ ಶ್ರಾವಣ ಆರಂಭವಾದ ಬಳಿಕ ಶುಭ ಸಮಾರಂಭಗಳು ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಹೂವುಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣಕ್ಕೆ ಧಾರಣೆಯೂ ಏರಿಕೆ ಕಂಡಿದೆ.
ನಗರಕ್ಕೆ ಸಮೀಪದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಮಲ್ಲಿಗೆಗೆ ಕೆಜಿ ಹೂವಿಗೆ ₹800 ಇತ್ತು. ಸುಗಂಧರಾಜ ಹೂವಿಗೆ ₹160, ಚೆಂಡು ಹೂವಿಗೆ ₹60, ಸೇವಂತಿಗೆಗೆ ₹200, ಮರ್ಲೆಗೆ ₹400 ಇತ್ತು. ಕಳೆದವಾರಕ್ಕೆ ಹೋಲಿಸಿದರೆ ಎಲ್ಲ ಹೂವುಗಳ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ.
ಕನಕಾಂಬರ ಬೆಲೆ ಕೆಜಿಗೆ ₹600ರಿಂದ ₹800ರವರೆಗೆ ಇದೆ. ಮಳೆಯ ಕಾರಣಕ್ಕೆ ಉತ್ತಮ ಕನಕಾಂಬರ ಹೂವು ಬರುತ್ತಿಲ್ಲ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.
‘ಶ್ರಾವಣ ಮಾಸದಲ್ಲಿ ಹೂವುಗಳಿಗೆ ಬೇಡಿಕೆ ಇರುತ್ತದೆ. ಮಹಾಲಕ್ಷ್ಮಿ ಹಬ್ಬ ಹತ್ತಿರದಲ್ಲಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಹಿಂದಿನ ದಿನ, ಆ ದಿನ ಬೆಲೆ ಈಗಿನ ಬೆಲೆಗಿಂತಲೂ ಹೆಚ್ಚಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.
ಹಸಿಮೆಣಸಿನಕಾಯಿ ತುಟ್ಟಿ: ತರಕಾರಿ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ ಬಿಟ್ಟು ಉಳಿದವುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.
ನಗರದ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಹಸಿ ಮೆಣಸಿನಕಾಯಿ ಬೆಲೆ ಕೆಜಿಗೆ ₹20 ಹೆಚ್ಚಾಗಿದೆ. ಸದ್ಯ ₹60 ಇದೆ.
ಹಲವು ವಾರಗಳಿಂದ ಸ್ಥಿರವಾಗಿದ್ದ ಆಲೂಗಡ್ಡೆ ಬೆಲೆ ಕೆಜಿಗೆ ₹10 ಹೆಚ್ಚಾಗಿ ₹40ಕ್ಕೆ ತಲುಪಿದೆ.
ಟೊಮೆಟೊ (₹10), ಬೀನ್ಸ್, ಕ್ಯಾರೆಟ್ (₹30), ಈರುಳ್ಳಿ (₹20–₹25), ಮೂಲಂಗಿ (₹20) ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹಣ್ಣುಗಳ ಪೈಕಿ ಸೇಬಿನ ಬೆಲೆ ಈವಾರ ಇಳಿದೆ. ಎರಡು ರೀತಿಯ ಸೇಬು ಹಣ್ಣುಗಳು ಹಾಪ್ಕಾಮ್ಸ್ ಮಳಿಗೆಗಳಲ್ಲಿದ್ದು, ₹140 ಹಾಗೂ ₹160 ಇದೆ.
ಹಬ್ಬದ ಕಾರಣಕ್ಕೆ ಏಲಕ್ಕಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಕೆಜಿಗೆ ₹10 ಜಾಸ್ತಿಯಾಗಿ ₹70ಕ್ಕೆ ತಲುಪಿದೆ.
ಕಿತ್ತಳೆಯ ದುಬಾರಿ ಬೆಲೆ (₹160) ಈ ವಾರವೂ ಮುಂದುವರಿದೆ. ದ್ರಾಕ್ಷಿಗೂ ₹120 ಇದೆ.
ಮಾಂಸ ಮಾರುಕಟ್ಟೆಯಲ್ಲಿ ಚಿಕನ್, ಮಟನ್, ಮೊಟ್ಟೆ ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ.