ಯಳಂದೂರು:‘ಪಾಲಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳಂತೆ ಕಾಣದೆ, ಮಾನವೀಯ ಮೌಲ್ಯ, ಶಿಸ್ತು, ಸಂಯಮಗಳ ಸಂಗಮವಾಗಿ ರೂಪಿಸಬೇಕಾದ ಅಗತ್ಯ ಇದೆ’ ಎಂದು ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳ ಕೈಗೆ ಪುಸ್ತಕ ನೀಡಬೇಕು. ಮನೆಗೆ ಒಂದಾದರೂ ಪತ್ರಿಕೆ ತರಿಸಬೇಕು. ಕೃಷಿ ಸಂಸ್ಕೃತಿ, ಗ್ರಾಮ ಜೀವನದ ಸೊಬಗನ್ನು ಆಹ್ಲಾದಿಸುವ ಮನಸ್ಸು ರೂಪಿಸಬೇಕು. ಇದರಿಂದ ಮಕ್ಕಳ ಮನೋಲೋಕ ವಿಕಾಸವಾಗುತ್ತದೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳು ತಿಳಿಯುತ್ತವೆ’ ಎಂದರು.
‘ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ಮೊಬೈಲ್ ಫೋನ್, ಟಿವಿಗಳ ದಾಸರಾಗಬಾರದು. ಮನಸ್ಸಿಗೆ ಮುದ ನೀಡುವ ಕತೆ, ಕವನ, ಸಾಧಕರ ಪುಸ್ತಕಗಳನ್ನು ಓದಬೇಕು. ಕ್ರೀಡೆ, ರಂಗಕಲೆಗಳಲ್ಲಿ ತೊಡಗಬೇಕು. ಇದರಿಂದ ಮಗು ಕೇಂದ್ರಿತ ಕಲಿಕೆಗೆ ಮಹತ್ವ ಬರುತ್ತದೆ’ ಎಂದು ಅವರು ವಿವರಿಸಿದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ನೃತ್ಯ, ರಂಗೋಲಿ ಕಲೆ ಹಾಗೂ ನಾಟಕ ಪ್ರದರ್ಶಿಸಿದರು.
ಸಂಸ್ಥಾಪಕ ಪಿ.ವೀರಭದ್ರಪ್ಪ, ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ವಿನಯ್, ಮುಖ್ಯ ಶಿಕ್ಷಕ ನಾಗರಾಜ್ ಹಾಗೂ ಪೋಷಕರು ಇದ್ದರು.