ಚಾಮರಾಜನಗರ:ನಗರದ 15ನೇ ವಾರ್ಡ್ನ ಬಾಬು ಜಗಜೀವನರಾಂ ಬಡಾವಣೆಯ ಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ೬ನೇ ವರ್ಷದ ಕುರುಬನಕಟ್ಟೆ ಕ್ಷೇತ್ರದ ಶ್ರೀ ಚನ್ನಯ್ಯ ಮತ್ತು ಶ್ರೀಲಿಂಗಯ್ಯ ಕಂಡಾಯಗಳ ಮಹೋತ್ಸವ ನಗರದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ಕಂಡಾಯಗಳ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಅದ್ದೂರಿಯಾಗಿ ನಡೆಯಿತು.
ನಗರದ ದೊಡ್ಡ ಅರಸನ ಕೊಳದ ದೇವಾಲಯದ ಮುಂಭಾಗ ವಿವಿಧ ಗ್ರಾಮದ ಕಂಡಾಯಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಸಾರೋಟಿನಲ್ಲಿ ಮಂಟೇಸ್ವಾಮಿ ಭಾವಚಿತ್ರ ಇರಿಸಿ ಪೂಜೆ ಮಾಡಲಾಯಿತು. ಸತ್ತಿಗೆ, ಸೂರಪಾನಿಗಳ ಸಹಿತ ಕಂಡಾಯಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನಗಾರಿ, ಪೂಜಾ ಕುಣಿತ, ಡೊಳ್ಳು ಕುಣಿತ, ಗೊರವರ ಕುಣಿತ, ವೀರಗಾಸೆ, ಬ್ಯಾಂಡ್ ಸೆಟ್, ಮಂಗಳ ವಾದ್ಯ, ಕೊಂಬು ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೂಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆದು, ಜಗಜೀವನರಾಂ ಬಡಾವಣೆಯಲ್ಲಿರುವ ಮಂಟೇಸ್ವಾಮಿ ದೇವಾಲಯದ ಮುಂಭಾಗ ಮೆರವಣಿಗೆ ಕೊನೆಗೊಂಡಿತು.
ವೇಳೆ ಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಮುಖಂಡರು, ಕುಲಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.