ಗುಂಡ್ಲುಪೇಟೆ: ಮೊಲ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಜಿ.ಎಸ್.ಬೆಟ್ಟವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಚೌಡಹಳ್ಳಿ ಗ್ರಾಮದ ಪ್ರಸಾದ್ (49), ಶಿವಪುರದ ಜವರಶೆಟ್ಟಿ (40) ಬಂಧಿತ ಆರೋಪಿಗಳು. ಬಂಡೀಪುರ ವಲಯದ ಹುಲಿಯಮ್ಮನ ದೇವಸ್ಥಾನದಿಂದ ಚೌಡನಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಇಬ್ಬರು ಟಾರ್ಚ್ ಹಿಡಿದು ಬರುವುದನ್ನು ಗಮನಿಸಿದ ಗಸ್ತು ವನಪಾಲಕರು ಉಪವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿ ನೋಡಿದಾಗ ಶೆಡ್ನೊಳಗೆ ಇಬ್ಬರು ಪಾತ್ರೆಯಲ್ಲಿ ಅಡುಗೆ ಮಾಡುವುದು ಕಂಡು ಬಂದಿದೆ.
ಬಂಧಿತರಿಂದ ಬೆಂಕಿಯಲ್ಲಿ ಸುಟ್ಟ ಮೊಲದ ಮೊಂಸ, ಒಂದು ನಾಡ ಬಂದೂಕು, ಬಂದೂಕಿಗೆ ಬಳಸಿದ ಮದ್ದು ಗುಂಡು, ಕತ್ತಿ, ಟಾರ್ಚ್ ವಶ ಪಡಿಸಿಕೊಳ್ಳಲಾಗಿದೆ.
ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ಕುಮಾರ್ ನಿರ್ದೇಶನದಂತೆ ಮೃತ ಮೊಲದ ಕಳೆಬರವನ್ನು ಬಂಡೀಪುರ ಹುಲಿ ಯೋಜನೆಯ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಜಿ.ಎಸ್.ಬೆಟ್ಟ ವಲಯದಲ್ಲಿ ಅರಣ್ಯ ಮೊಕದ್ದಮೆ ದಾಖಲು ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.