ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ‌ ಜಮೀನಿನಲ್ಲಿ‌ ಪತನವಾದ ವಾಯುಪಡೆ ಲಘು ವಿಮಾನ: ಆಗಿದ್ದೇನು?

ವಾಯುಪಡೆ ತರಬೇತಿ ವಿಮಾನ ಪತನ, ಇಬ್ಬರು ಪೈಲಟಗಳು ಪಾರು
Published 1 ಜೂನ್ 2023, 12:36 IST
Last Updated 1 ಜೂನ್ 2023, 12:36 IST
ಅಕ್ಷರ ಗಾತ್ರ

ಚಾಮರಾಜನಗರ: ಭಾರತೀಯ ವಾಯುಸೇನೆಯ 'ಕಿರಣ್' ತರಬೇತಿ ವಿಮಾನವೊಂದು ಗುರುವಾರ ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಂಗ್ ಕಮಾಂಡರ್ ತೇಜ್ ಪಾಲ್ (50) ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಭೂಮಿಕಾ (28) ಅವರು ವಿಮಾನ ನಿಯಂತ್ರಣ ತಪ್ಪುತ್ತಲೇ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ವಾಯುಪಡೆಯು ಇಬ್ಬರನ್ನೂ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆದೊಯ್ದಿದೆ.

'ತರಬೇತಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ. ಪತನದ ಕಾರಣವನ್ನು ಪತ್ತೆ ಮಾಡುವುದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ' ಎಂದು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ‌.

ಹೊತ್ತಿ ಉರಿದು ಬಿದ್ದ ವಿಮಾನ: ಬುಧವಾರ ಬೆಳಿಗ್ಗೆ 11.50ರ ಸುಮಾರಿಗೆ ಘಟನೆ ನಡೆದಿದೆ. ಭೋಗಾಪುರ ಗ್ರಾಮ ಪಂಚಾಯಿತಿಯ ಸಪ್ಪಯ್ಯನಪುರದ ಸರ್ವೆ‌ ನಂಬರ್‌ 75 ಜಮೀನಿನಲ್ಲಿ ವಿಮಾನ ಪತನಗೊಂಡಿದೆ.

'ಆಗಸದಲ್ಲಿ ಸ್ಫೋಟದ ಶಬ್ದಕೇಳಿತು. ವಿಮಾನ ಎರಡು ಸುತ್ತು ತಿರುಗಿತು. ಅಷ್ಟರಲ್ಲಿ ಇಬ್ಬರು ಪ್ಯಾರಚೂಟ್ ಮೂಲಕ ಕೆಳಕ್ಕೆ ಇಳಿಯುವುದು ಕಾಣಿಸಿತು. ಸ್ವಲ್ಪ ದೂರದಲ್ಲಿ ವಿಮಾನ ಉರಿಯುತ್ತ ಕೆಳಗಡೆ‌ ಬಿತ್ತು. ಸ್ಥಳಕ್ಕೆ ಬಂದು‌ ನೋಡಿದಾಗ ವಿಮಾನದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಜನರು ಯಾರೂ ಇರಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ‌ ನೀಡಿದೆವು' ಎಂದು ಪ್ರತ್ಯಕ್ಷದರ್ಶಿ ಭೋಗಾಪುರದ ಮಹೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

ಪೈಲಟ್ ಗಳು ಸುರಕ್ಷಿತ
'ವಿಮಾನ ಬಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ಪೈಲಟ್ ಗಳಿಬ್ಬರೂ ಪ್ಯಾರಚೂಟ್ ಮೂಲಕ ಇಳಿದಿದ್ದರು. ಇಬ್ಬರಿಗೂ ಹೆಚ್ಚು ಗಾಯಗಳಾಗಿರಲಿಲ್ಲ. ಹಿರಿಯ ಪೈಲಟ್ ಅವರ ತುಟಿ ಒಡೆದಿತ್ತು. ಆಸ್ಪತ್ರೆಗೆ ಹೋಗೋಣವೇ ಎಂದು ಕೇಳಿದೆವು. 'ಅವರು ಬೇಡ, ನಮ್ಮ ರಕ್ಷಣಾ ತಂಡ ಬರಲಿದೆ' ಎಂದು ಹೇಳಿದರು. ಹತ್ತು‌ನಿಮಿಷಗಳ ಬಳಿಕ ಬೆಂಗಳೂರಿನಿಂದ ವಾಯುಸೇನೆಯ ಮೂರು ಹೆಲಿಕಾಪ್ಟರ್ ಗಳು ಬಂದು ಇಬ್ಬರನ್ನೂ ‌ಕರೆದೊಯ್ದವು' ಎಂದು ಭೋಗಾಪುರ ಗ್ರಾಮ‌ಪಂಚಾಯಿತಿ ಸದಸ್ಯ ಸೋಮಶೇಖರ್ ಕೆಲ್ಲಂಬಳ್ಳಿ ಅವರು ಮಾಹಿತಿ ನೀಡಿದರು.
ಅಗ್ನಿಶಾಮಕದಳ, ಪೊಲೀಸರ ದೌಡು
ವಿಷಯ ಗೊತ್ತಾಗುತ್ತಲೇ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಹೊತ್ತ ಉರಿಯುತ್ತಿದ್ದ ವಿಮಾನದ ಅವಶೇಷಗಳಿಗೆ ನೀರು‌ ಎರಚಿ ಬೆಂಕಿ‌ ನಂದಿಸಿದರು. ವಾಯುಸೇನೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾಧ್ಯಮಗಳೊಂದಿಗೆ ಮಾತನಾಡಲು‌ ನಿರಾಕರಿಸಿದರು.
ಭಾರಿ ಜನ
ಭೋಗಾಪುರ ಮತ್ತು ಸಪ್ಪಯ್ಯನಪುರ ಜನವಸತಿ ಪ್ರದೇಶಗಳ‌ ನಡುವೆ ಇರುವ ಖಾಲಿ ಜಮೀನಿನಲ್ಲಿ ವಿಮಾನ ಪತನಗೊಂಡ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ವಿಮಾನ ಬಿದ್ದಿರುವ ವಿಷಯ ತಿಳಿಯುತ್ತಲೇ ಎರಡು ಊರುಗಳಲ್ಲದೆ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಊರುಗಳ ಜನರು ಭಾರಿ ಸಂಖ್ಯೆಯಲ್ಲಿ‌ ಸೇರಿದ್ದರು. ಅವರನ್ನು‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಅರ್ಧ ಗಂಟೆಯಲ್ಲಿ ಸ್ಥಳದಲ್ಲಿ ವಾಯುಸೇನಾ ಅಧಿಕಾರಿಗಳು
ಘಟನೆ ನಡೆದ ಅರ್ಧಗಂಟೆಯಲ್ಲಿ ವಾಯುಪಡೆಯ ಮೂರು‌ ಹೆಲಿಕಾಪ್ಟರ್ ಗಳು ಘಟನೆ ನಡೆದ ಸ್ಥಳದ ಸಮೀಪ ಬಂದಿಳಿದವು. ವಾಯುಪಡೆಯ ಅಧಿಕಾರಿಗಳು ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಇಬ್ಬರು ಪೈಲಟ್ ಗಳನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದರು. ಇನ್ನೂ‌ ಕೆಲವು ಅಧಿಕಾರಿಗಳು ವಿಮಾನ‌ ಪತನಗೊಂಡ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT