ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಎರಡು ದಿನಗಳ ಅಂತರದಲ್ಲಿ ಪರವಾನಗಿ ಇಲ್ಲದೆ ಕಟ್ಟಡ ಕಲ್ಲು ಸಾಗಣೆ ಮಾಡುತ್ತಿದ್ದ ಏಳು ಲಾರಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದರೆ, ಗುರುವಾರ ಐದು ಲಾರಿಗಳನ್ನು ಜಪ್ತಿ ಮಾಡಿದ್ದರು.
ಅಕ್ರಮ ಗಣಿಗಾರಿಗೆ ಹಾಗೂ ಸಾಗಣಿಕೆ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿರುವ ಮೇರೆಗೆ ಗಣಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗುರುವಾರಚಾಮರಾಜನಗರ ತಾಲ್ಲೂಕಿನಲ್ಲಿ ಕಟ್ಟಡ ಕಲ್ಲು ಸಾಗಿಸುತ್ತಿದ್ದ ಮೂರು ಲಾರಿಗಳು ಹಾಗೂ ಗುಂಡ್ಲುಪೇಟೆಯಲ್ಲಿ ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದರು. ಶುಕ್ರವಾರ ಚಾಮರಾಜನಗರದಲ್ಲಿ ಮತ್ತೆ ಎರಡು ಲಾರಿಗಳನ್ನು ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಣಿ ಇಲಾಖೆ ಉಪ ನಿರ್ದೇಶಕಿಡಾ. ಲಕ್ಷಮ್ಮ ನೇತೃತ್ವದಲ್ಲಿ ಭೂ ವಿಜ್ಙಾನಿಗಳಾದ ಜನಾರ್ದನ್, ಅನುಷಾ, ವಿದ್ಯಾ ಅವರು ಕಾರ್ಯಾಚರಣೆ ನಡೆಸಿದ್ದರು.