ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣೆಯ ಮರು ಮತದಾನ ಶಾಂತಿಯುತವಾಗಿ ನಡೆದಿದೆ. ಆದರೆ, ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದ್ದು, 528 ಮತದಾರರ ಪೈಕಿ 71 ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 32 ಪುರುಷರು ಮತ್ತು 39 ಮಂದಿ ಮಹಿಳೆಯರು. ಶೇ 13.35ರಷ್ಟು ಮತದಾನವಾಗಿದೆ.
ಈ ಮತಗಟ್ಟೆ ವ್ಯಾಪ್ತಿಗೆ ಇಂಡಿಗನತ್ತ ಮತ್ತು ಮೆಂದಾರೆ ಗ್ರಾಮಗಳು ಬರುತ್ತಿದ್ದು, ಮೆಂದಾರೆಯ 58 ಮತ್ತು ಇಂಡಿಗನತ್ತ ಗ್ರಾಮದ 13 ಮಂದಿ ಹಕ್ಕು ಚಲಾಯಿಸಿದ್ದಾರೆ.
26ರಂದು ನಡೆದಿದ್ದ ಮತದಾನ ಸಂದರ್ಭದಲ್ಲಿ ಘರ್ಷಣೆ ಉಂಟಾಗಿ, ಉದ್ರಿಕ್ತರು ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗಳಿಗೆ ಹಾನಿ ಮಾಡಿದ್ದರು. ಹಾಗಾಗಿ, ಮರು ಮತದಾನಕ್ಕೆ ಚುನಾವಣಾ ಆಯೋಗ ತೀರ್ಮಾನಿಸಿತ್ತು.